ಪ್ರಜಾವಾಣಿ ವಾರ್ತೆ
ಕಂಪ್ಲಿ: ‘ತಾಲ್ಲೂಕಿನ ಗುತ್ತಿಗೆದಾರರು ಈಗಾಗಲೇ ನಿರ್ವಹಿಸಿರುವ ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು’ ಗುತ್ತಿಗೆದಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ರಮೇಶ್ ದೇವಲಾಪುರ ಒತ್ತಾಯಿಸಿದರು.
ಇಲ್ಲಿಯ ಅತಿಥಿಗೃಹದಲ್ಲಿ ಭಾನುವಾರ ನಡೆದ ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
‘ಬ್ಯಾಂಕ್, ಲೇವಾದೇವಿಗಾರರಿಂದ ಸಾಲ ಪಡೆದು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಹಲವು ಗುತ್ತಿಗೆದಾರರು ಆಸ್ತಿ ಅಡಮಾನ ಇಟ್ಟಿದ್ದಾರೆ. ಬಾಕಿ ಬಿಲ್ ಪಾವತಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸರ್ಕಾರದಿಂದ ಅನುದಾನ ಸಿಗದೆ ಗುತ್ತಿಗೆದಾರರು ತೊಂದರೆ ಎದುರಿಸುತ್ತಿದ್ದಾರೆ. ಮಂಜೂರಾದ ಕಾಮಗಾರಿಗೆ ಗ್ರಾವೆಲ್ ಸೇರಿದಂತೆ ವಿವಿಧ ತೊಡಕುಗಳಿವೆ. ಗುತ್ತಿಗೆದಾರರ ಹಿತಾಸಕ್ತಿಗೆ ಸರ್ಕಾರ ಕ್ರಮ ವಹಿಸಬೇಕು. ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಎನ್. ಮಲ್ಲಿಕಾರ್ಜುನರೆಡ್ಡಿ ಮಾತನಾಡಿ, ‘ಮುಂದಿನ ಸಭೆಯಲ್ಲಿ ಉಳಿದ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು. ಸಂಘದ ಕಚೇರಿಗೆ ನಿವೇಶನ ಒದಗಿಸುವಂತೆ ಪುರಸಭೆಗೆ ಮನವಿ ಸಲ್ಲಿಸಲಾಗುವುದು’ ಎಂದರು.
ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ. ರಾಮಾಂಜಿನಿ ಸುಗ್ಗೇನಹಳ್ಳಿ, ಪದಾಧಿಕಾರಿಗಳಾದ ಎನ್. ತಿಪ್ಪಯ್ಯ, ಪಿ. ಬಾಲೇಸಾಬ್ ಎಮ್ಮಿಗನೂರು, ಮೆಟ್ರಿ ಮಹೇಶ್, ವೀರಭದ್ರುಡು, ರಾಗಿ ಗಿರೀಶ್ ರಾಮಸಾಗರ, ಭಾಸ್ಕರ, ತಿಮ್ಮಾರೆಡ್ಡಿ ಸುಗ್ಗೇನಹಳ್ಳಿ, ಬಸವಪ್ರಭು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.