ADVERTISEMENT

ನಿಯಮ ಉಲ್ಲಂಘನೆ: ಲಾಠಿ ಪ್ರಹಾರ

ರಥೋತ್ಸವ: ಶೆಡ್‌ಗೆ ರಥ ಅಪ್ಪಳಿಸಿ ಮಹಿಳೆಯರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 3:26 IST
Last Updated 27 ಜನವರಿ 2021, 3:26 IST
ಹೂವಿನಹಡಗಲಿ ತಾಲ್ಲೂಕು ಸೋಗಿ ಸುಕ್ಷೇತ್ರದಲ್ಲಿ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು
ಹೂವಿನಹಡಗಲಿ ತಾಲ್ಲೂಕು ಸೋಗಿ ಸುಕ್ಷೇತ್ರದಲ್ಲಿ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು   

ಹೂವಿನಹಡಗಲಿ: ತಾಲ್ಲೂಕಿನ ಸೋಗಿ ಸುಕ್ಷೇತ್ರದಲ್ಲಿ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಮಂಗಳವಾರ ಸಂಜೆ ಜರುಗಿತು.

ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದ ಸ್ವಾಮಿಯ ಪಲ್ಲಕ್ಕಿ ಉತ್ಸವ ರಥದ ಸುತ್ತ ಪ್ರದಕ್ಷಿಣೆ ಹಾಕಿತು. ರಥಕ್ಕೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿದ ಬಳಿಕ ಭಕ್ತರ ಜಯ ಘೋಷದೊಂದಿಗೆ ರಥೋತ್ಸವ ಆರಂಭವಾಯಿತು.

ಕೋವಿಡ್ ಮಾರ್ಗಸೂಚಿಯಂತೆ ಐದು ಸುತ್ತು ಮಾತ್ರ ರಥ ಎಳೆದು ಸರಳ ರಥೋತ್ಸವ ನಡೆಸಲು ಧಾರ್ಮಿಕ ದತ್ತಿ ಇಲಾಖೆ ಅನುಮತಿ ನೀಡಿತ್ತು. ಈ ನಿಯಮ ಉಲ್ಲಂಘಿಸಿ ಭಕ್ತರು ರಥವನ್ನು ಹಿಗ್ಗಾಮುಗ್ಗಾ ಎಳೆದಿದ್ದರಿಂದ ಬದಿಯಲ್ಲಿದ್ದ ಶೆಡ್ ಗೆ ರಥ ಅಪ್ಪಳಿಸಿ ಮಹಿಳೆಯರು ಸೇರಿದಂತೆ ಏಳು ಜನರು ಗಾಯಗೊಂಡರು. ಅವಘಡ ಸಂಭವಿಸುವ ಮುನ್ಸೂಚನೆ ಅರಿತ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಈ ವೇಳೆ ನೂಕು ನುಗ್ಗಲು, ಕಾಲ್ತುಳಿತ ಸಂಭವಿಸಿ ಕೆಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಸೋಗಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸೇರಿದಂತೆ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ವೀರಭದ್ರೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಅಭಿಷೇಕ, ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಸರದಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನಾಶೀರ್ವಾದ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.