ಹೊಸಪೇಟೆ: ತಾಲ್ಲೂಕಿನ ಇಂಗಳಗಿಯಲ್ಲಿ ಭಾನುವಾರ ಚಿರತೆ ದಾಳಿ ನಡೆಸಿದ್ದರಿಂದ ಕುರಿಗಾಹಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕ್ಯಾದಗಳ್ಳ ಪಂಪಾಪತಿ (45) ಗಂಭೀರವಾಗಿ ಗಾಯಗೊಂಡವರು. ಅವರ ಮುಖ, ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ಗ್ರಾಮದ ಹೊರವಲಯದಲ್ಲಿ ಕುರಿಗಳೊಂದಿಗೆ ಐದು ಜನ ಕುರಿಗಾಹಿಗಳು ಮಲಗಿದ್ದರು. ತಡರಾತ್ರಿ ಮೂರು ಗಂಟೆ ಸುಮಾರಿಗೆ ಚಿರತೆ ಪಂಪಾಪತಿ ಮೇಲೆ ದಾಳಿ ನಡೆಸಿದೆ. ಈ ವೇಳೆ ಪಂಪಾಪತಿ ಜೋರಾಗಿ ಕಿರುಚಿದ್ದಾರೆ. ಇತರೆ ಕುರಿಗಾಹಿಗಳು ಅವರ ನೆರವಿಗೆ ಧಾವಿಸಿದಾಗ ಚಿರತೆ ಓಡಿ ಹೋಗಿದೆ. ಪಂಪಾಪತಿ ಅವರಿಗೆ ಗಂಭೀರ ಗಾಯಗಳಾಗಿವೆ. ಅವರು ಕಂಬಳಿ ಹೊದ್ದುಕೊಂಡು ಮಲಗಿದ್ದರಿಂದ ಗಾಯಗಳಷ್ಟೇ ಆಗಿವೆ. ಇಲ್ಲವಾದಲ್ಲಿ ಅವರ ಜೀವ ಹೋಗುತ್ತಿತ್ತು' ಎಂದು ಗ್ರಾಮಸ್ಥ ಇಂಗಳಗಿ ಉದೇದಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಗ್ರಾಮದ ಸುತ್ತ ಚಿರತೆ ಹಾವಳಿ ಹೆಚ್ಚಾಗಿದೆ. ಜನ ಜೀವ ಭಯದಲ್ಲಿ ಓಡಾಡುತ್ತಿದ್ದಾರೆ. ಅವುಗಳ ಉಪಟಳ ತಪ್ಪಿಸಲು ಅರಣ್ಯ ಇಲಾಖೆ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.