ಹೊಸಪೇಟೆ: ನಗರದ ಹಂಪಿ ರಸ್ತೆಯ ರೈಸ್ ಮಿಲ್ ಸಮೀಪ ಮಂಗಳವಾರ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಯುವಕ, ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಲ್ಲಿನ ಎಸ್.ಆರ್. ನಗರದ ನಿವಾಸಿ ರಾಜು (32), ಕಾರಿಗನೂರಿನ ಹಂಪಿನಕಟ್ಟೆಯ ರಂಜಿತಾ (24) ಮೃತರು. ‘ರಾಜು ಬೈಕ್ ಓಡಿಸುತ್ತಿದ್ದರೆ, ರಂಜಿತಾ ಹಿಂಬದಿ ಕೂತಿದ್ದರು. ಇಬ್ಬರು ಗಾಳೆಮ್ಮನ ಗುಡಿ ದೇವಸ್ಥಾನದಿಂದ ನಗರಕ್ಕೆ ಬರುತ್ತಿದ್ದರು. ಅನಂತಶಯನಗುಡಿಯ ರೈಸ್ ಮಿಲ್ ಬಳಿಯ ತಿರುವಿನಲ್ಲಿ ಎದುರಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡು, ರಕ್ತಸ್ರಾವವಾಗಿ ರಾಜು, ರಂಜಿತಾ ಮರಣ ಹೊಂದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ಚಾಲಕ ಹಾಗೂ ಲಾರಿಯನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ಬಳಿಕ ಇಬ್ಬರ ಮೃತದೇಹ, ಬೈಕ್ ರಸ್ತೆಯ ಮಧ್ಯದಲ್ಲಿಯೇ ಬಿದ್ದದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಪೊಲೀಸರು ಶವಗಳನ್ನು ಸಾಗಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.