ಹೊಸಪೇಟೆ: ಗುರುವಾರ ಲಿಂಗೈಕ್ಯರಾದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರ ಪಾರ್ಥೀವ ಶರೀರದ ದರ್ಶನವನ್ನು ಬಸವ ಭಕ್ತರು ಶುಕ್ರವಾರ ರಾತ್ರಿ ನಗರಹೊರವಲಯದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಪಡೆದರು.
ಚಿತ್ರದುರ್ಗದಿಂದ ಕೂಡಲಸಂಗಮಕ್ಕೆ ಅವರ ಪಾರ್ಥೀವ ಶರೀರವನ್ನು ಗಾಜಿನ ವಾಹನದಲ್ಲಿ ಕೊಂಡೊಯ್ಯಲಾಯಿತು. ತಮ್ಮ ಊರಿನ ಮೂಲಕ ಹೋಗುತ್ತಿರುವ ವಿಷಯ ಗೊತ್ತಾಗಿ ಸ್ಥಳೀಯ ಲಿಂಗಾಯತ ಸಮಾಜ ಹಾಗೂ ಬಸವ ಬಳಗದವರು ಹೆದ್ದಾರಿಯ ಸುರಂಗ ಮಾರ್ಗದ ಬಳಿ ಸೇರಿದ್ದರು. ಮಾತೆಯವರ ಪಾರ್ಥೀವ ಶರೀರ ಬರುತ್ತಿದ್ದಂತೆ ಹೂಮಳೆಗರೆದರು. ನಂತರ ದರ್ಶನ ಪಡೆದರು. ‘ಮಾತೆಯವರಿಗೆ ಜಯವಾಗಲಿ’ ಎಂದು ಘೋಷಣೆಗಳನ್ನು ಹಾಕಿದರು. ಕೆಲವು ಭಕ್ತರು ಭಾವುಕರಾಗಿ ಕಣ್ಣೀರು ಹಾಕಿದರು.
ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಇದ್ದದ್ದರಿಂದ ಕೆಲಕಾಲ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಬಿಗಿ ಬಂದೋಬಸ್ತ್ ನಡುವೆ ಮುಂದೆ ಪ್ರಯಾಣ ಬೆಳೆಸಿದರು. ಹೆದ್ದಾರಿ ಮಾರ್ಗ ಮಧ್ಯದ ಗ್ರಾಮಗಳ ಜನ ವಿಷಯ ತಿಳಿದು ರಸ್ತೆಬದಿ ಸೇರಿದ್ದರು. ವಾಹನ ಬರುತ್ತಿದ್ದಂತೆ ದರ್ಶನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.