ಹೊಸಪೇಟೆ: ‘ವೈಭೋಗಗಳಿಂದ ಲೋಕಕಲ್ಯಾಣ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಭಗವಾನ್ ಮಹಾವೀರರು ತಂದೆ– ತಾಯಿ ಅನುಮತಿ ಪಡೆದು ವೈರಾಗ್ಯ ಸ್ವೀಕರಿಸಿ ಲೋಕಕಲ್ಯಾಣ ಮಾಡಿದರು’ ಎಂದುಮೈಸೂರಿನ ಎಸ್.ಡಿ.ಎಂ. ಮಹಿಳಾ ಕಾಲೇಜಿನ ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ನಿಟ್ಟೂರು ದೇವೇಂದ್ರ ಕುಮಾರ ತಿಳಿಸಿದರು.
ಅಭೇರಾಜ್ ಬಲ್ಡೊಟ್ ಜೈನ ಅಧ್ಯಯನ ಪೀಠದಿಂದ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಮಹಾವೀರ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
‘ಜ್ಞಾನವಿಲ್ಲದ ಧ್ಯಾನ ಪರಿಪಕ್ವತೆಯಿಲ್ಲ. ಜ್ಞಾನದಿಂದ ಜೀವನವನ್ನು ವೃದ್ಧಿ ಮಾಡಿಕೊಂಡು ಸಮಾಜವನ್ನು ಸುಧಾರಿಸಿಬಹುದು ಎಂಬುದು ಮಹಾವೀರರ ಆಶಯ ಆಗಿತ್ತು. ಈ ತತ್ವದಿಂದಲೇ ಅಹಿಂಸಾ ಮಾರ್ಗ ಹಿಡಿದು ಲೋಕೋದ್ಧಾರ ಮಾಡಿದರು’ ಎಂದರು.
‘ಜೈನ ಧರ್ಮವು ಗುಣಗಣಗಳ ಆರಾಧನಾ ಧರ್ಮ. ಇಲ್ಲಿ ಗುಣಗಳನ್ನು ಮಾತ್ರ ಆರಾಧನೆ ಮಾಡಲಾಗುತ್ತದೆ ಹೊರತು ವ್ಯಕ್ತಿಗಳನ್ನಲ್ಲ. ಜೈನ ಧರ್ಮವು ಅನಾದಿಕಾಲದಿಂದ ಬಂದಿರುವ ಧರ್ಮ. ಕಾಲಘಟ್ಟ ಬದಲಾದಂತೆ ಧರ್ಮವು ಪ್ರಚಾರದ ಮೂಲಕ ಜಗತ್ಪ್ರಸಿದ್ಧಿಯಾಗಿದೆ. ಭಗವಾನ್ ಮಹಾವೀರ ಅಹಿಂಸೆಯ ತತ್ವದ ಮೂಲಕ ತಮ್ಮದೇ ಆದ ಕೊಡುಗೆಯನ್ನು ಈ ಸಮಾಜಕ್ಕೆ ನೀಡಿದ್ದಾರೆ. ಮಹಾವೀರ ಜನಿಸಿದ ಸಂದರ್ಭದಲ್ಲಿ ಜಗತ್ತಿನಲ್ಲಿರುವ ಸಕಲ ಜೀವರಾಶಿಯೇ ಸಂಭ್ರಮಿಸಿದರು. ಅಂತಹ ಯುಗಪುರುಷ ಮಹಾವೀರರು’ ಎಂದು ವಿವರಿಸಿದರು.
ಕುಲಪತಿ ಪ್ರೊ. ಸ.ಚಿ. ರಮೇಶ, ‘ಮಹಾವೀರರ ಕ್ರಾಂತಿಕಾರಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಇಂದಿನ ಕಾಲಘಟ್ಟದಲ್ಲಿ ಹಿಂಸೆ ತಾಂಡವವಾಡುತ್ತಿದೆ. ಭಗವಾನ್ ಮಹಾವೀರರ ಚಿಂತನೆಗಳ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲು ಶ್ರಮಿಸಬೇಕಿದೆ’ ಎಂದು ಹೇಳಿದರು.
ಕುಲಸಚಿವ ಅಶೋಕಕುಮಾರ ರಂಜೇರೆ,ಅಭೇರಾಜ್ ಬಲ್ಡೋಟ್ ಜೈನ ಅಧ್ಯಯನ ಪೀಠದ ಸಂಚಾಲಕ ಎಲ್. ಶ್ರೀನಿವಾಸ, ಮಾನವಶಾಸ್ತ್ರ ಅಧ್ಯಯನ ವಿಭಾಗ ಪ್ರಾಧ್ಯಾಪಕ ತಾರಿಹಳ್ಳಿ ಹನುಮಂತಪ್ಪ, ಸಂಶೋಧನಾ ವಿದ್ಯಾರ್ಥಿ ಜಿ. ಗೋಣಿಬಸಪ್ಪ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.