‘ಮನರೇಗಾ’
ಬಳ್ಳಾರಿ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯಡಿ (ಮನರೇಗಾ) ಕೆಲಸ ಮಾಡುವವರ ಹಾಜರಾತಿಯಲ್ಲಿ ಅಕ್ರಮ ಆಗಿರುವುದನ್ನು ಕೇಂದ್ರ ಸರ್ಕಾರ ಪತ್ತೆ ಮಾಡಿದೆ. ಇದಕ್ಕೆ ಪೂರಕವಾಗಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯು ಎಲ್ಲಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಸುತ್ತೋಲೆ ಹೊರಡಿಸಿದೆ.
‘ಮನರೇಗಾ’ ಕಾರ್ಮಿಕರ ನಿತ್ಯದ ಹಾಜರಾತಿ, ಕಾಮಗಾರಿ ಸ್ಥಳದ ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡಲು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ‘ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ವ್ಯವಸ್ಥೆ (ಎನ್ಎಂಎಂಎಸ್)’ ಎಂಬ ಮೊಬೈಲ್ ಆ್ಯಪ್ ಜಾರಿಗೆ ತಂದಿದೆ. ಈ ತಂತ್ರಾಂಶಕ್ಕೆ ಅಸಂಬದ್ಧ ಚಿತ್ರಗಳು, ಚಿತ್ರದ ಮೇಲೆ ಮತ್ತೊಂದು ಚಿತ್ರ ಹಾಕುತ್ತಿರುವುದು, ಕೆಲಸಗಾರರು, ಮಹಿಳೆ, ಪುರುಷರ ಎಣಿಕೆಯಲ್ಲಿ ವ್ಯತ್ಯಾಸವಾಗಿರುವುದು, ಒಂದಕ್ಕಿಂತ ಹೆಚ್ಚಿನ ಮಸ್ಟರ್ ರೋಲ್ನಲ್ಲಿ ಒಬ್ಬರೇ ಕೆಲಸಗಾರ ಇರುವುದು, ಬೆಳಗಿನ ಮತ್ತು ಮಧ್ಯಾಹ್ನದ ಚಿತ್ರಗಳಲ್ಲಿ ಬೇರೆ ಬೇರೆ ಕೆಲಸಗಾರರು ಇರುವುದು, ಮಧ್ಯಾಹ್ನದ ಫೋಟೊ ಅಪ್ಲೋಡ್ ಆಗದೇ ಇರುವುದು ಕಂಡು ಬಂದಿದೆ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ತಿಳಿಸಿದೆ.
ಇದನ್ನು ಪರಿಹರಿಸಲು ಆಯಾ ದಿನದ ಕೆಲಸಗಾರರ ಹಾಜರಾತಿ, ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ನಿತ್ಯ ನಾಲ್ಕು ಹಂತಗಳಲ್ಲಿ (ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ) ಪರಿಶೀಲಿಸಬೇಕು. ತಾಲ್ಲೂಕು–ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ತಂಡ ಇರಬೇಕು, ಈ ತಂಡಗಳನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪರಿಶೀಲಿಸಬೇಕು, ಮಧ್ಯಾಹ್ನದ ಹಾಜರಾತಿ ಮತ್ತು ಚಿತ್ರ ಅಪ್ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಸೂಚಿಸಲಾಗಿದೆ.
ಅಕ್ರಮ ತಡೆದರೆ ಬಾರಿ ಉಳಿಕೆ: ‘ಮನರೇಗಾದ ಕೆಲಸಗಾರರ ಹಾಜರಾತಿಯಲ್ಲಿ ಅಕ್ರಮ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಒಬ್ಬರೇ ಹಲವು ಕಡೆ ಕೆಲಸ ಮಾಡುವುದು, ಬೆಳಿಗ್ಗೆ ಮತ್ತು ಮಧ್ಯಾಹ್ನ ಬೇರೆ ಬೇರೆ ಕೆಲಸಗಾರರು ಇರುವುದನ್ನು ಹಲವು ಬಾರಿ ಪತ್ತೆಯಾಗಿದೆ. ಕೇಂದ್ರ ಸರ್ಕಾರದ ಈ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಕಾರ್ಮಿಕರು ಮತ್ತು ಮಾನವ ದಿನಗಳ ಸೃಜನೆಯಲ್ಲಿ ಆಗುತ್ತಿರುವ ಅಕ್ರಮ ತಡೆಗಟ್ಟಬಹುದು. ಸರ್ಕಾರಕ್ಕೆ ಹಣ ಉಳಿತಾಯ ಆಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.