ಬಳ್ಳಾರಿ: ಅಕ್ರಮ ಸಂಬಂಧವನ್ನು ವಿರೋಧಿಸಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳಿಬ್ಬರನ್ನೂ ಎಪಿಎಂಸಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶಬಿಯಾ ಸುಲ್ತಾನ ಮತ್ತು ಆಕೆಯ ಪ್ರಿಯಕರ ನಜೀರ್ ಬಾಷಾ ಬಂಧಿತರು. ಈ ಇಬ್ಬರೂ ಸಾಷಾವಲಿ (37) ಅವರಿಗೆ ಡಿ.3ರಂದು ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಿ, ಕಾರಿನಲ್ಲಿ ಸಾಗಿಸಿ ಅಲ್ಲೀಪುರ ಸಮೂಪದ ತುಂಗಭದ್ರ ಮೇಲ್ಮಟ್ಟದ ಕಾಲುವೆಗೆ ಎಸೆದಿದ್ದರು.
’ಮೃತರ ತಾಯಿ ಶುಕ್ರವಾರ ದೂರು ನೀಡಿದ್ದ ಮೇರೆಗೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೃತದೇಹ ಶನಿವಾರ ಕಣೆಕಲ್ ಬಳಿ ಸಿಕ್ಕಿದೆ’ ಎಂದು ಪೊಲೀಸರು ತಿಳಿಸಿದರು.
ಬೊಲೆರೊ ಪಲ್ಟಿ: ಒಬ್ಬನ ಸಾವು
ಬಳ್ಳಾರಿ: ತಾಲ್ಲೂಕಿನ ರೂಪನಗುಡಿ ರಸ್ತೆಯಲ್ಲಿರುವ ತೊಲಮಾಮಿಡಿ ಗ್ರಾಮದ ಬಳಿ ಮರಳು ತುಂಬಿಕೊಂಡು ಬಳ್ಳಾರಿ ಕಡೆಗೆ ಬರುತ್ತಿದ್ದ ಬೊಲೆರೊ ವಾಹನ ಸಮೀಪದ ತಿರುಮಲ ನಗರದ ಬಳಿ ಶನಿವಾರ ಬೆಳಿಗಿನ ಜಾವ ಕಾಲುವೆಯ ತಡೆಗೋಡೆಗೆ ಗುದ್ದಿ ಪಲ್ಟಿಯಾಗಿದ್ದು, ವಾಹನದ ಹಿಂಬದಿ ಕುಳಿತಿದ್ದ, ನಗರದ ಉಮಾಶಂಕರ ನಗರದ ನಿವಾಸಿ ಪವನ್ (18) ಮೃತಪಟ್ಟರು.
ಚಾಲಕನ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ. ವಾಹನದಲ್ಲಿದ್ದ ಮೆಹಬೂಬ್ ಬಾಷಾ, ಶಿವ, ಉಮೇಶ್ ಚಿಕಿತ್ಸೆ ಪಡೆದು ಕ್ಷೇಮವಾಗಿದ್ದಾರೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.