ಬಳ್ಳಾರಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ಜಾಡು ಹಿಡಿದು ಬಳ್ಳಾರಿಗೆ ಬಂದಿರುವ ಎನ್ಐಎ ತಂಡ ಶುಕ್ರವಾರವೂ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸುವಲ್ಲಿ ನಿರತವಾಗಿತ್ತು.
ಆದರೆ, ಇಲ್ಲಿನ ಕ್ಯಾಮೆರಾಗಳು ಸರಿಯಾದ ಕೋನದಲ್ಲಿ ಇಲ್ಲದಿರುವುದು ಮತ್ತು ದೃಶ್ಯಾವಳಿಗಳ ಗುಣಮಟ್ಟದ ಕೊರತೆ ಕಾರಣ ಸಮಸ್ಯೆಯಾಯಿತು.
ಬಳ್ಳಾರಿಯ ಕೆಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಒಟ್ಟು 14 ಸಿಸಿಟಿವಿ ಕ್ಯಾಮೆರಾಗಳಿವೆ. ಅವುಗಳಲ್ಲಿ 10 ಕ್ಯಾಮೆರಾ ಸುಸ್ಥಿತಿಯಲ್ಲಿವೆ. ಇನ್ನುಳಿದ ಕ್ಯಾಮೆರಾಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ಇಲ್ಲ. ಹೀಗಾಗಿ ಅವುಗಳ ಕೋನ ಸರಿಯಾಗಿಲ್ಲ. ಜತೆಗೆ, ಅವುಗಳ ದೃಶ್ಯೀಕರಣ ಗುಣಮಟ್ಟ ಉತ್ತಮವಾಗಿಲ್ಲ ಎಂದು ಗೊತ್ತಾಗಿದೆ. ಹೀಗಾಗಿ ಶಂಕಿತನ ಚಲನವಲನ ಪತ್ತೆ ಕಾರ್ಯ ಎನ್ಐಎಗೆ ಸವಾಲಾಗಿದೆ.
‘ಶಂಕಿತ ವ್ಯಕ್ತಿ ಬಂದು ಹೋದ ದಿನದ ನಂತರದ ಮೂರು–ನಾಲ್ಕು ದಿನಗಳ ದೃಶ್ಯಾವಳಿಗಳನ್ನು ಎನ್ಐಎ ತಂಡ ಕೇಳಿದೆ. ನಿಲ್ದಾಣದ ಅಧಿಕಾರಿಗಳು ಅವುಗಳನ್ನು ಒದಗಿಸುತ್ತಿದ್ದಾರೆ. ಶುಕ್ರವಾರವೂ ಅದೇ ಕೆಲಸ ನಡೆದಿದೆ‘ ಎಂದು ಅಧಿಕಾರಿಯೊಬ್ಬರು ಹೇಳಿದರು.
ಇಬ್ಬರ ವಿಚಾರಣೆ: ಬಳ್ಳಾರಿಯಲ್ಲಿ ಈ ಹಿಂದೆ ಎನ್ಐಎ ಬಂಧಿಸಿದ್ದ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್ ಮತ್ತು ಸೈಯದ್ ಸಮೀರ್ನ ಸ್ನೇಹಿತರಿಬ್ಬರನ್ನು ಎನ್ಐಎ ತಂಡ ಶುಕ್ರವಾರ ವಿಚಾರಣೆಗೆ ಒಳಪಡಿಸಿದೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.