ADVERTISEMENT

ಸೋಫಿಯಾ ನಿಂದನೆಗೆ ಆಕ್ರೋಶ

ಮಧ್ಯಪ್ರದೇಶ ಸಚಿವನ ವಜಾ ಮಾಡಲು ಮೋದಿಗೆ ಸವಾಲು ಹಾಕಿದ ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:24 IST
Last Updated 15 ಮೇ 2025, 16:24 IST
ಸುದ್ದಿಗೋಷ್ಠಿಯಲ್ಲಿ ವಿ.ಎಸ್‌ ಉಗ್ರಪ್ಪ ಮಾತನಾಡಿದರು. 
ಸುದ್ದಿಗೋಷ್ಠಿಯಲ್ಲಿ ವಿ.ಎಸ್‌ ಉಗ್ರಪ್ಪ ಮಾತನಾಡಿದರು.    

ಬಳ್ಳಾರಿ: ‘ಸೇನಾ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ‘ಭಯೋತ್ಪಾದಕರ ಸೋದರಿ’ ಎಂದಿರುವ ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಸಚಿವ ವಿಜಯ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು’ ಎಂದು ಮಾಜಿ ಸಂಸದ, ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕರ್ನಲ್ ಸೋಫಿಯಾ ರಾಜ್ಯದ  ಹೆಮ್ಮೆಯ ಸೊಸೆ. ಅವರ ಬಗ್ಗೆ ಭಾರತೀಯ ಸೇನೆಗೆ ವಿಶ್ವಾಸವಿರುವುದರಿಂದಲೇ ಸೇನೆಯ ದಾಳಿ ಕುರಿತಂತೆ ಮಾಹಿತಿ ನೀಡುವ ಜವಾಬ್ದಾರಿ ನೀಡಿದ್ದಾರೆ. ಆಕೆ ವಿರುದ್ಧ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ದೇಶ, ಸೇನೆ, ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ. ವಿಜಯ್‌ ಶಾ ಅವರನ್ನು ಸಚಿವ ಸಂಪುಟದಿಂದ ಕಿತ್ತೆಸೆಯಬೇಕು’ ಎಂದರು. 

ಟ್ರಂಪ್ ಮಾತು ಕೇಳಿದ್ದೇಕೆ?: ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಉಗ್ರರ ವಿರುದ್ಧ ಉತ್ಸಾಹದಿಂದ ದಾಳಿ ಮಾಡುತ್ತಿತ್ತು. ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಪಡೆಯಲು ಇದು ತಕ್ಕ ಸಮಯವಾಗಿತ್ತು. ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತು ಕೇಳಿ ಕದನ ವಿರಾಮ ಘೋಷಿಸಿದ್ದೇಕೆ? ಟ್ರಂಪ್ ಏನು ಹೇಳಿದ್ದರು ಎಂಬುದನ್ನು ಪ್ರಧಾನಿ ಮೋದಿ ಅವರು ದೇಶದ ಜನತೆಗೆ ತಿಳಿಸಬೇಕು’ ಎಂದು ಉಗ್ರಪ್ಪ ಒತ್ತಾಯಿಸಿದರು. 

ADVERTISEMENT

ನೆಹರೂ, ಇಂದಿರಾಗಾಂಧಿ, ವಾಜಪೇಯಿ ಅವರಂಥ ನಾಯಕತ್ವದ ಆಡಳಿತದ ಸದ್ಯ ದೇಶಕ್ಕೆ ಅಗತ್ಯವಾಗಿದೆ. ವಿಪಕ್ಷಗಳ ಸಭೆ ಕರೆದಾಗ ಪ್ರಧಾನಿಯೇ ಎರಡು ಬಾರಿ ಗೈರಾಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. 

‌ರೆಡ್ಡಿ ಲೂಟಿಗೆ ಬಿಎಸ್‌ವೈ ಸಹಕಾರ: ‘ಜನಾರ್ದನ ರೆಡ್ಡಿ ರಾಜ್ಯದ ಸಂಪತ್ತು ಲೂಟಿ ಮಾಡಿರುವುದಾಗಿ ನ್ಯಾಯಾಲಯ ಹೇಳಿದೆ. ಲೂಟಿಕೋರತನಕ್ಕೆ ಅವರಷ್ಟೇ ಕಾರಣರಲ್ಲ. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಂದಿನ ಜಿಲ್ಲಾಧಿಕಾರಿ, ಎಸ್‌ಪಿ, ಅರಣ್ಯ ಅಧಿಕಾರಿಗಳೂ ಕಾರಣರು. ಅವರ ಮೇಲೂ ಕ್ರಮಗಳಾಗಬೇಕು. ಬಿಎಸ್‌ವೈ ಸಹಕಾರದಿಂದಲೇ ರೆಡ್ಡಿ ಅಷ್ಟು ಲೂಟಿ ಮಾಡಲು ಸಾಧ್ಯವಾಯಿತು’ ಎಂದು ಉಗ್ರಪ್ಪ ಆರೋಪಿಸಿದರು. 

ಶ್ರೀರಾಮುಲು ಬಾಯಿ ಬಿಡಲಿ: ‘ಜನಾರ್ದನ ರೆಡ್ಡಿಯ ಅಕ್ರಮದ ಬಗ್ಗೆ ಮಾಜಿ ಸಚಿವ ಬಿ.  ಶ್ರೀರಾಮುಲು ಏನು ಹೇಳುತ್ತಾರೆ? ಏಕೆ ಈವರೆಗೆ ಬಾಯಿಬಿಟ್ಟಿಲ್ಲ. ಈಗಲಾದರೂ ಬಾಯಿಬಿಡಿ ಎಂದು ವ್ಯಂಗ್ಯವಾಡಿದರು. ಜನಾರ್ದನ ರೆಡ್ಡಿ ಜೊತೆಗಿದ್ದ ವೇಳೆ ಅರಣ್ಯ ಅಧಿಕಾರಿ ರಾಜಶೇಖರನ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿರುವ ಪ್ರಕರಣಗಳನ್ನು ಉಗ್ರಪ್ಪ ಇದೇ ವೇಳೆ ನೆನಪಿಸಿದರು. 

ಕಾಂಗ್ರೆಸ್ ಮುಖಂಡರಾದ ವೆಂಕಟೇಶ ಹೆಗಡೆ, ಅಸುಂಡಿ ನಾಗರಾಜಗೌಡ, ಎರುಕುಲಸ್ವಾಮಿ, ಟಿ.ಲೋಕೇಶ್, ಮಲ್ಲೇಶ್ವರಿ, ಜೋಗಿನ ಚಂದ್ರ, ಟಪಾಲ್ ಏಕಾಂಬರಂ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.