ADVERTISEMENT

ಮುದ್ದಾಮ ಅಲ್ಲ, ಉದ್ಧಾಮ ಕವಿಯಾಗಿ: ಹಿರಿಯ ಲೇಖಕ ಮಲ್ಹಾರಿ ದೀಕ್ಷಿತ್‌

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 15:02 IST
Last Updated 12 ಡಿಸೆಂಬರ್ 2020, 15:02 IST
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶನಿವಾರ ಹೊಸಪೇಟೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಶೇಖರಗೌಡ ಮಾಲೀಪಾಟೀಲ ಮಾತನಾಡಿದರು
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶನಿವಾರ ಹೊಸಪೇಟೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಶೇಖರಗೌಡ ಮಾಲೀಪಾಟೀಲ ಮಾತನಾಡಿದರು   

ಹೊಸಪೇಟೆ: ‘ಕವನ ಬರೆಯುವವರು ಮುದ್ದಾಮ ಕವಿಗಳಾಗದೇ ಉದ್ಧಾಮ ಕವಿಗಳಾಗಬೇಕು’ ಎಂದು ಹಿರಿಯ ಲೇಖಕ ಮಲ್ಹಾರಿ ದೀಕ್ಷಿತ್‌ ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಯಾರು ಸಂವೇದನಾಶೀಲರಾಗಿ ಇರುತ್ತಾರೋ ಅಂಥವರು ಕವನ ಬರೆಯುತ್ತಾರೆ. ಎಲ್ಲ ನೋಡಿಕೊಂಡು ಅವರು ಸುಮ್ಮನಿರುವುದಿಲ್ಲ. ಅವರಿಗೆ ಏನೋ ಕಾಡುತ್ತಿರುತ್ತದೆ. ಅದು ಕವನದ ರೂಪದಲ್ಲಿ ಹೊರಹೊಮ್ಮುತ್ತದೆ’ ಎಂದು ಹೇಳಿದರು.

ADVERTISEMENT

‘ಹದಿಹರೆಯದ ವಯಸ್ಸಿನಲ್ಲಿ ಎಲ್ಲರೂ ಪ್ರೇಮ ಕವಿಗಳಾಗುವುದು ಸಹಜ, ಆದರೆ ಅಂಥಹ ಕವಿಗಳಾಗಬಾರದು. ಓದುವುದನ್ನು ಎಂದೂ ಬಿಡಬಾರದು. ಆಯಾ ವ್ಯವಸ್ಥೆಯಲ್ಲಿ ನೋವು ಅನುಭವಿಸಿದವರೇ ಹೆಚ್ಚು ಪರಿಣಾಮಕಾರಿಯಾಗಿ ಬರೆಯಬಲ್ಲರು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ‘ಕೊರೊನಾ ತಂದೊಡ್ಡಿರುವ ಸಂಕಷ್ಟಗಳಿಂದ ನಾವು ಸಾಕಷ್ಟು ಪಾಠ ಕಲಿಯಬೇಕಿದೆ. ಅದಕ್ಕೆ ಅನುಗುಣವಾಗಿ ನೋವಿನಲ್ಲಿ ಇರುವವರಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಶೇಖರಗೌಡ ಮಾಲೀಪಾಟೀಲ, ‘ಕನ್ನಡ ಭಾಷೆ ಶ್ರೀಮಂತವಾದುದು. ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು’ ಎಂದು ತಿಳಿಸಿದರು.

ವಿಜಯನಗರ ಕಾಲೇಜಿನ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಪರಿಷತ್ತಿನ ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ, ಕಾರ್ಯದರ್ಶಿ ಮಂಜುನಾಥ, ಗೌರವ ಅಧ್ಯಕ್ಷ ಲಿಂಗಾರೆಡ್ಡಿ, ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಮಧುರಚೆನ್ನಶಾಸ್ತ್ರಿ, ವೀರಮ್ಮ ಹಿರೇಮಠ ಇದ್ದರು. 30 ಜನ ಕವಿತೆ ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.