ADVERTISEMENT

ಜಮಖಂಡಿಯ ಇಬ್ರಾಹಿಂಸಾಬ್‌ ಗೆಲುವು

ಕೆ.ನರಸಿಂಹ ಮೂರ್ತಿ
Published 3 ಮಾರ್ಚ್ 2019, 19:17 IST
Last Updated 3 ಮಾರ್ಚ್ 2019, 19:17 IST
150 ಕೆಜಿ ತೂಕದ ಗುಂಡನ್ನು ಸಲೀಸಾಗಿ ಎತ್ತಿದ ಜಮಖಂಡಿಯ ಗಟ್ಟಿಗ ಇಬ್ರಾಹಿಂಸಾಬ್‌. ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್
150 ಕೆಜಿ ತೂಕದ ಗುಂಡನ್ನು ಸಲೀಸಾಗಿ ಎತ್ತಿದ ಜಮಖಂಡಿಯ ಗಟ್ಟಿಗ ಇಬ್ರಾಹಿಂಸಾಬ್‌. ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್   

ಬಳ್ಳಾರಿ: ಹಂಪಿ ಉತ್ಸವದ ಎರಡನೇ ದಿನವಾದ ಭಾನುವಾರ ಹೊಸಮಲಪನ ಗುಡಿಯಲ್ಲಿ ನಡೆದ ಗುಂಡು ಎತ್ತುವ ಸ್ಪರ್ಧೆಯ ಎರಡನೇ ಹಂತದಲ್ಲಿ 150 ಕೆಜಿ ತೂಕದ ಗುಂಡನ್ನು ಕೇವಲ 3ನಿಮಿಷ 10 ಸೆಕೆಂಡುಗಳಲ್ಲಿ ಎತ್ತಿ ಬಿಸಾಕಿದ ಜಮಖಂಡಿಯ ಇಬ್ರಾಹಿಂ ಸಾಬ್‌, ಮೂರನೇ ಹಂತದ 175 ಕೆಜಿ ತೂಕದ ಗುಂಡನ್ನು ಎತ್ತುವ ಸ್ಪರ್ಧೆಯಿಂದ ಹಿಂದೆ ಸರಿದರೂ ಮೊದಲ ಬಹುಮಾನವನ್ನೇ ಪಡೆದರು!

ರೋಮಾಂಚಕ ಪಂದ್ಯದ ಎದುರಾಳಿಯಾಗಿದ್ದ ರಾಯಚೂರಿನ ಈಶ್ವರ್‌ ಕಲ್ಲೂರು, ಎರಡನೇ ಹಂತದಲ್ಲಿ 150 ಕೆಜಿ ತೂಕದ ಗುಂಡನ್ನು ಎತ್ತಲು ಅವರಿಗಿಂತಲೂ ಹೆಚ್ಚು ಕಾಲಾವಕಾಶವನ್ನು (4ನಿಮಿಷ 76 ಸೆಕೆಂಡ್) ಪಡೆದಿದ್ದರು.

ಸ್ಪರ್ಧೆಯ ತಾಂತ್ರಿಕ ನಿಯಮಗಳನ್ನು ಅರಿತ ಇಬ್ರಾಹಿಂಸಾಬ್‌ ಮೂರನೇ ಹಂತದಲ್ಲಿ ಭಾಗವಹಿಸುವುದಿಲ್ಲ ಎಂದು ಸಂಘಟಕರಿಗೆ ತಿಳಿಸಿದರು. ಕಣದಲ್ಲಿ ಉಳಿದಿದ್ದ ಏಕೈಕ ಸ್ಪರ್ಧಿಯಾಗಿದ್ದ ಈಶ್ವರ್‌ ಅವರಿಗೆ 175ಕೆಜಿ ತೂಕದ ಗುಂಡನ್ನು ಎತ್ತಲು ಆಗಲಿಲ್ಲ.

ADVERTISEMENT

ಪರಿಣಾಮವಾಗಿ ಎರಡನೇ ಹಂತದಲ್ಲಿ ಅವರಿಗಿಂತ ಕಡಿಮೆ ಸಮಯದಲ್ಲಿ ಗುಂಡು ಎತ್ತಿದ್ದ ಇಬ್ರಾಹಿಂ ಅವರನ್ನೇ ವಿಜೇತರೆಂದು ಸಂಘಟಕರು ಘೋಷಿಸಿ ₨ 10 ಸಾವಿರ ನಗದು ಬಹುಮಾನ ನೀಡಿದರು. ಈಶ್ವರ್‌ ₨5 ಸಾವಿರ ನಗದು ಬಹುಮಾನ ಪಡೆದರು. ಬಳ್ಳಾರಿ, ಕೊಪ್ಪಳ, ರಾಯಚೂರಿನ 11 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಭಾರ ಎತ್ತುವ ಸ್ಪರ್ಧೆ:

ಏಳು ತೂಕದ ವಿಭಾಗಗಳಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆ (ಬೆಂಚ್‌ ಪ್ರೆಸ್‌)ಯ ಪೈಕಿ 105ಕೆ.ಜಿ, 74 ಕೆ.ಜಿ ಹಾಗೂ 66 ಕೆ.ಜಿ ವಿಭಾಗದಲ್ಲಿ ದಾವಣಗೆರೆಯ ಸ್ಪರ್ಧಾಳುಗಳೇ ಪ್ರಥಮ ಸ್ಥಾನ ಗಳಿಸಿ ಮಿಂಚಿದರು. ಗೆದ್ದವರ ಸಾಲಿನಲ್ಲಿ ಹುಬ್ಬಳ್ಳಿ, ಹೊಸಪೇಟೆಯವರೂ ಶಕ್ತಿ ಪ್ರದರ್ಶಿಸಿದರು. ಪ್ರಥಮ–ದ್ವಿತೀಯ ಬಹುಮಾನವಾಗಿ ₨ 5 ಸಾವಿರ ಹಾಗೂ ₨ 3 ಸಾವಿರ ನಗದು ಬಹುಮಾನ ಪಡೆದರು.

ವಿಜೇತರ ವಿವರ:

120 ಕೆಜಿ: ಹುಬ್ಬಳ್ಳಿಯ ಅಶ್ರಫ್‌ ಅಲಿ ಕಿತ್ತೂರು (1), ಅಭಿಷೇಕ್‌.ಬಿ.ಹೊರಕೇರಿ (2),105 ಕೆಜಿ: ದಾವಣಗೆರೆಯ ದಾದಾಪೀರ್ (1), ಆರ್‌.ಎಲ್.ಶಿವಪ್ರಕಾಶ್‌ (2), 93 ಕೆಜಿ: ದಾವಣಗೆರೆಯ ಗಿರೀಶ್‌ (1), ಹೊಸಪೇಟೆಯ ಎಂ.ಅಮೀರ್‌ಜಾನ್‌ (2), 83 ಕೆಜಿ: ಹೊಸಪೇಟೆಯ ಸಿ.ವಿ.ರಾಜೇಂದ್ರ (1), ಸುನೀಲ್‌ ಪಿ ಜಡಿ (2), 74 ಕೆ.ಜಿ: ದಾವಣಗೆರೆಯ ಸಿ.ನಾಗರಾಜ್‌ (1), ಆರ್‌.ಕೆ.ಮೊಹ್ಮದ್‌ ಗೌಸ್‌(ಹುಬ್ಬಳ್ಳಿ), 66 ಕೆ.ಜಿ; ದಾವಣಗೆರೆಯ ಪಿ.ಮಂಜಪ್ಪ (1), ಆರ್‌.ರಮೇಶ್‌ (2), 59 ಕೆ.ಜಿ.: ಚನ್ನಗಿರಿಯ ಎಸ್‌.ಕೆ.ಚಂದ್ರಶೇಖರ್ (1), ಕಡೂರಿನ ಎಂ.ಕೆ.ತೀರ್ಥೇಶ (2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.