ADVERTISEMENT

ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ‌ ಕ್ರಿಯಾಯೋಜನೆ: ಸಚಿವ ‌ತುಕಾರಾಂ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 5:17 IST
Last Updated 26 ಜನವರಿ 2019, 5:17 IST
ತುಕಾರಾಂ
ತುಕಾರಾಂ   

ಬಳ್ಳಾರಿ: ಜಿಲ್ಲೆಯ ಗಣಿ ಭಾದಿತ ಪ್ರದೇಶಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿಮುಂದಿನ 3 ವರ್ಷಗಳಿಗೆ ಒಟ್ಟು ರೂ.765 ಕೋಟಿಗಳನ್ನು ನಿಗದಿಪಡಿಸಿ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು. ಸಂಬಂಧಪಟ್ಟ ಕ್ಷೇತ್ರದ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಅಭಿವೃದ್ದಿ ಕೈಗೊಳ್ಳಲಾಗುವುದು ಎಂದು ಸಚಿವ ಈ.ತುಕಾರಾಂ ಹೇಳಿದರು.

ನಗರದ ‌ಜಿಲ್ಲಾ ಕ್ರೀಡಾಂಗಣದಲ್ಲಿ‌ ಶನಿವಾರ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಗಣಿ ಭಾದಿತ ಪ್ರದೇಶ ಅಭಿವೃದ್ದಿ ಯೋಜನೆಯಡಿ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ .13 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ಉನ್ನತಾಧಿಕಾರ‌ ಸಮಿತಿಗೆ ಸಲ್ಲಿಸಿದ್ದು, ಅನುಮೋದನೆ ದೊರಕುವ ನಿರೀಕ್ಷೆ‌ ಇದೆ ಎಂದರು.

ಜಿಲ್ಲೆಯು ವಿಶಿಷ್ಟ ಇತಿಹಾಸವನ್ನು ಹೊಂದಿದ್ದು, ಹಂಪಿಯು ವಿಶ್ವದ ಪಾರಂಪರಿಕ ಸ್ಥಳಗಳ ವೀಕ್ಷಣೆಯ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ, ವಿಜಯನಗರ ಸಾಮ್ರಾಜ್ಯದ ಅಂದಿನ ಅರಸರು ಆಳ್ವಿಕೆಯಲ್ಲಿ ಆಡಳಿತ ಮತ್ತು ಅಭಿವೃದ್ದಿಯ ಮಾದರಿಯನ್ನೇ ಅಳವಡಿಸಿಕೊಂಡು ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

ADVERTISEMENT

1972ರಲ್ಲಿ ಜಿಲ್ಲೆಯ ಸಂಡೂರಿನಲ್ಲಿ ಎನ್.ಎಂ.ಡಿ.ಸಿ ಮತ್ತು ಜಿ.ಎಸ್.ಡಬ್ಲ್ಯೂ ಕಾರ್ಖಾನೆ ಸ್ಥಾಪನೆಗೊಂಡು ಅನೇಕ ಸ್ಥಳೀಯರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ ಎಂದರು.

ಜಿಲ್ಲೆಯ 70,050 ರೈತರಿಗೆ ಸಹಕಾರಿ ಬ್ಯಾಂಕ್ ನಿಂದ ತಲಾ 1 ಲಕ್ಷ ಸಾಲ ಮನ್ನಾ ಕಾರ್ಯ ಪ್ರಗತಿಯಲ್ಲಿದ್ದು, 75.05 ಕೋಟಿ ಬಿಡುಗಡೆಯಾಗಿದೆ ಎಂದರು.

619 ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಮೂರು ತಿಂಗಳ ಅವಧಿಗೆ ಸಾಲ ಮಂಜೂರು ಮಾಡಲಾಗಿದೆ ಎಂದರು.

ಬಳ್ಳಾರಿ ನಗರಕ್ಕೆ ತುಂಗಭದ್ರ ಅಣೆಕಟ್ಟೆಯಿಂದ ನೇರವಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ಯೋಜನೆಯನ್ನು ರೂಪಿಸಲಾಗಿದೆ. ಬಳ್ಳಾರಿ ವಿಮ್ಸ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು .200 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಗಣಿಬಾಧಿತ ಪ್ರದೇಶದ ಸುಮಾರು 40 ಸಾವಿರ ಬಡವರಿಗೆ ಮನೆಯನ್ನು ಕಲ್ಪಿಸಿ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸಂಡೂರಿನಲ್ಲಿ ವೈದ್ಯಕೀಯ ಕಾಲೇಜು ಮತ್ತು ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಸಂಸದ ‌ವಿ.ಎಸ್.ಉಗ್ರಪ್ಪ, ಶಾಸಕರಾದ ‌ಕೆ.ಸಿ.ಕೊಂಡಯ್ಯ, ಜಿ.ಸೋಮಶೇಖರ ರೆಡ್ಡಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸಿ.ಭಾರತಿ, ಉಪಾಧ್ಯಕ್ಷೆ ಪಿ.ದೀನಾ, ಮೇಯರ್ ಆರ್.ಸುಶೀಲಾ ಬಾಯಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರಮೀಜಾ ಬಿ, ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ನಿತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.