ಹೊಸಪೇಟೆ (ವಿಜಯನಗರ): ‘ಮಾಹಿತಿ ಹಕ್ಕು ಕಾಯ್ದೆ (ಆರ್.ಟಿ.ಐ) ಪ್ರಜೆಗಳ ಶಕ್ತಿಯಾಗಿದೆ’ ಎಂದು ಆರ್ಟಿಐ ಕಾರ್ಯಕರ್ತ ಎ.ಎಂ.ಪಿ. ವಾಗೀಶ ತಿಳಿಸಿದರು.
ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಆರ್ಟಿಐ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಹಕ್ಕು ಆಯೋಗದ ನೀತಿ ನಿಯಮಗಳನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ಕಡ್ಡಾಯವಾಗಿ ತಿಳಿದುಕೊಂಡಿರಬೇಕು’ ಎಂದು ಹೇಳಿದರು.
‘ಆರ್ಟಿಐ ಅಡಿ ಯಾರಾದರೂ ಅರ್ಜಿ ಸಲ್ಲಿಸಿದರೆ ಹೆಚ್ಚಿನ ಅಧಿಕಾರಿಗಳು ಭಯ ಬೀಳುತ್ತಾರೆ. ಅಧಿಕಾರಿಗಳಿಗೆ ಯಾವ ಮಾಹಿತಿ ಕೊಡಬೇಕು. ಯಾವ ಮಾಹಿತಿ ಕೊಡಬಾರದು ಎಂಬ ಸೂಕ್ತ ಮಾಹಿತಿಯ ಅರಿವಿಲ್ಲದೆಯೇ ತಪ್ಪು ಮಾಹಿತಿ, ವೈಯಕ್ತಿಕ ಮಾಹಿತಿ ಕೊಟ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಭಯದಲ್ಲಿ ಅಧಿಕಾರಿಗಳು ಸರ್ಕಾರದ ಗೌಪ್ಯ ಮಾಹಿತಿಯನ್ನೆ ಸೋರಿಕೆ ಮಾಡುತ್ತಾರೆ’ ಎಂದರು.
‘ಅಧಿಕಾರಿಗಳು ಮಾಹಿತಿ ಹಕ್ಕಿನ ನೀತಿ ನಿಯಮ ಸರಿಯಾಗಿ ಅರಿತಿರಬೇಕು. ಈ ಮಾಹಿತಿ ಹಕ್ಕು ಅಧಿನಿಯಮದಲ್ದಿ ಪ್ರತಿಯೊಬ್ಬ ಪ್ರಜೆಯೂ ಸಹ ಸರ್ಕಾರದ ಯೋಜನೆಗಳ ಬಗ್ಗೆ, ವೆಚ್ಚದ ಬಗ್ಗೆ ಮಾಹಿತಿ ಪಡೆಯುವ ಹಕ್ಕು ಹೊಂದಿದ್ದಾನೆ. ಯಾವಾಗ ಪ್ರಜೆ ಪ್ರಜ್ಞಾವಂತನಾಗುತ್ತಾನೋ ಆಗ ಅಡಳಿತದಲ್ಲಿ ಪಾರದರ್ಶಕತೆ ಬರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಕುಲಸಚಿವ ಎ. ಸುಬ್ಬಣ್ಣ ರೈ ಮಾತನಾಡಿ, ‘ಯಾವ ಮಾಹಿತಿ ಕೊಡಬೇಕು, ಯಾವ ಮಾಹಿತಿ ಕೊಡಬಾರದು ಎಂಬ ನೀತಿ ನಿಯಮಗಳು ಸಹ ಮಾಹಿತಿ ಹಕ್ಕು ಅಧಿನಿಯಮದಲ್ಲಿವೆ. ಅಧಿಕಾರಿಗಳು ಯಾವುದೇ ಮಾಹಿತಿ ಕೊಡುವಾಗ ಭಯಭೀತರಾಗದೆ ಎಚ್ಚರಿಕೆಯಿಂದ ಮಾಹಿತಿಗಾಗಿ ಬಂದ ಅರ್ಜಿ ಪರಿಶೀಲಿಸಿ, ಮಾಹಿತಿ ನೀಡಬೇಕು’ ಎಂದು ಹೇಳಿದರು.
ಮಾಹಿತಿ ಕೇಂದ್ರದ ಉಪನಿರ್ದೇಶಕಿ ಡಿ. ಮೀನಾಕ್ಷಿ, ಉಪಕುಲಸಚಿವ ಎ.ವೆಂಕಟೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.