ಸಂಡೂರು : ತಾಲ್ಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಕಾರ್ಖಾನೆಯ ಒಪಿಜೆ ಕೇಂದ್ರದಲ್ಲಿನ ಮಹಿಳಾ ಬಿಪಿಓ ಕೇಂದ್ರಕ್ಕೆ ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ ಅವರು ಶನಿವಾರ ಭೇಟಿ ನೀಡಿ ಗ್ರಾಮೀಣ ಪ್ರದೇಶದ ಮಹಿಳೆಯರ ಜೊತೆಗೆ ಕೆಲ ಕಾಲ ಚರ್ಚಿಸಿದರು.
ನಂತರ ಮಾತನಾಡಿದ ಅವರು ‘ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮ ಆರ್ಥಿಕ ಸ್ವಾವಲಂಬನೆಗಾಗಿ ಸ್ವಯಂ ಉದ್ಯೋಗಗಳನ್ನು ಕೈಗೊಳ್ಳಬೇಕು. ಜಿಂದಾಲ್ ಕಾರ್ಖಾನೆಯ ಒಪಿಜೆ ಕೆಂದ್ರದ ಆವರಣದಲ್ಲಿರುವ ಮಹಿಳಾ ಬಿಪಿಓ ಕೇಂದ್ರವು ಉತ್ತರ ಕರ್ನಾಟಕದಲ್ಲಿ ಅತಿದೊಡ್ಡ ಮಹಿಳಾ ಸಮುದಾಯ ಕೇಂದ್ರದವಾಗಿ ಅಭಿವೃದ್ಧಿ ಹೊಂದುತ್ತಿರುವುದು ಸಂತಸದ ವಿಚಾರ’ ಎಂದು ಹೇಳಿದರು.
‘ವಿವಿಧ ಸಂಸ್ಕೃತಿ, ಕಲೆ, ಪರಂಪರೆಯ ರಾಜ್ಯವಾದ ನಾಗಾಲ್ಯಾಂಡನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ. ನಮ್ಮ ರಾಜ್ಯವು ಸಾಕ್ಷರತೆ, ಲಿಂಗ ಸಮಾನತೆ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಅನೇಕ ಸವಾಲುಗಳ ನಡುವೆ ಸಮೃದ್ಧಿ ರಾಜ್ಯವನ್ನಾಗಿ ನಿರ್ಮಿಸಲು ಶ್ರಮಿಸಲಾಗುತ್ತಿದೆ. ನಮ್ಮ ರಾಜ್ಯದ ಮಹಿಳಾ ಸಮುದಾಯದ ಅಭಿವೃದ್ಧಿಗೆ ಜಿಂದಾಲ್ ಕಂಪನಿಯ ಸಹಕಾರವು ಬಹಳ ಮುಖ್ಯವಾಗಿದೆ’ ಎಂದು ಹೇಳಿದರು.
ಬಿಪಿಓ ಮುಖ್ಯಸ್ಥ ರಾಹುಲ್ ಅವರು ನಾಗಾಲ್ಯಾಂಡ್ ರಾಜ್ಯದಲ್ಲಿ ಬಿಪಿಓ ಕೇಂದ್ರದ ಸ್ಥಾಪನೆಯ ಕುರಿತು ನೀಲ ನಕ್ಷೆಯ ಕುರಿತು ವಿವರಿಸಿದರು.
ಜಿಂದಾಲ್ ಸಂಸ್ಥೆಯ ಉಪಾಧ್ಯಕ್ಷ ಸುನೀಲ್ ರಾಲ್ಫ್, ಸಿಎಸ್ಆರ್ ಚಟುವಟಿಕೆಯ ಮುಖ್ಯಸ್ಥ ಪೆದ್ಧಣ್ಣ ಬಿಡಾಲ, ವಿವಿಧ ಗ್ರಾಮಗಳ ಮಹಿಳೆಯರು, ಜಿಂದಾಲ್ ಕಾರ್ಖಾನೆಯ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.
ಆರ್ಥಿಕ ಸ್ವಾವಲಂಬನೆಯಾಗಿ ಸ್ವಂತ ಉದ್ಯೋಗ ಕೈಗೊಳ್ಳಿ ಜಿಂದಾಲ್ ಕಂಪನಿಯ ಸಹಕಾರ ಕೋರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.