ಹೊಸಪೇಟೆ: ವಾರದ ಅಂತರದೊಳಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಎರಡನೇ ಕೊಲೆಯಾಗಿದೆ.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಲಾರಿಯಲ್ಲಿ ಮಲಗಿದ್ದ ಚಾಲಕ ಚಿದಾನಂದ(40) ಎಂಬುವರ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಲಾಗಿದೆ.
‘ಮರಿಯಮ್ಮನಹಳ್ಳಿವರಾದ ಚಿದಾನಂದ ಶನಿವಾರ ಎಪಿಎಂಸಿಯಲ್ಲಿ ಲೋಡ್ ಇಳಿಸಿ, ರಾತ್ರಿ ಅಲ್ಲಿಯೇ ಮಲಗಿದ್ದಾರೆ. ತಡರಾತ್ರಿ 3ರಿಂದ 4 ಗಂಟೆಯ ನಡುವೆ ಯಾರೊ ಅವರ ತಲೆಯ ಮೇಲೆ ಕಲ್ಲು ಹಾಕಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಸಹೋದರ ಮಹಾಲಿಂಗ ಕೊಟ್ಟಿರುವ ದೂರಿನ ಮೇರೆಗೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ’ ಎಂದು ಟಿ.ಬಿ. ಡ್ಯಾಂ ಸಿಪಿಐ ಎ. ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಜ. 9ರಂದು ತಾಲ್ಲೂಕಿನ ಕಾಳಘಟ್ಟದಲ್ಲಿ ಮಹಿಳೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಂದು ಕೊಲೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.