ಸಂಡೂರು: ತಾಲ್ಲೂಕಿನ ಚೋರನೂರು ಹೋಬಳಿಯ ಗೊಲ್ಲಲಿಂಗಮ್ಮನಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಶುಕ್ರವಾರ ಬೀಜ ಬಿತ್ತೋತ್ಸವ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಲಯ ಅರಣ್ಯಾಧಿಕಾರಿ ಗಿರೀಶ್ ಕುಮಾರ್, ‘ಮೇ 15ರಿಂದ ಜೂನ್ 15ರ ವರೆಗೆ ಒಂದು ತಿಂಗಳು ಬೀಜ ಬಿತ್ತೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಮೊದಲ ಹಂತ ಈ ಭಾಗದಲ್ಲಿ ನಡೆಯುತ್ತಿದ್ದು ನಂತರ ಬನ್ನಿಹಟ್ಟಿ, ಸೋಮಲಾಪುರ ಅರಣ್ಯ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಿದ್ದೇವೆ’ ಎಂದರು.
‘ಪ್ರತಿ ಪ್ರದೇಶದಲ್ಲಿ 5 ಹೆಕ್ಟೇರ್ ನಂತೆ ಬೀಜ ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ. ಹೊಂಗೆ, ಹಿಪ್ಪೆ, ಸೋಮೆ, ಮುತ್ತುಗ, ಸೀತಾಫಲ, ಸೀಮೆ ತಂಗಡಿ, ನೇರಳೆ, ಕಕ್ಕೆ ಹಾಗೂ ಇತರೆ ಸ್ಥಳೀಯ ಜಾತಿಯ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ. ಹಿಂದೆ ನೆಟ್ಟ ಗಿಡಗಳ ಇಕ್ಕೆಲಗಳಲ್ಲಿ, ಇಂಗುಗುಂಡಿಗಳಲ್ಲಿ ನೆಡುವುದರಿಂದ ಬೇಗ ಮೊಳಕೆಯೊಡೆಯಲಿವೆ’ ಎಂದು ತಿಳಿಸಿದರು.
ಗೊಲ್ಲಲಿಂಗಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾದ ಗೋವಿಂದಪ್ಪ, ಗಂಗಪ್ಪ, ಹನುಮಂತಪ್ಪ, ಉಮೇಶ, ಯರ್ರಿಸ್ವಾಮಿರೆಡ್ಡಿ, ಸಂತೋಷ್ ರೆಡ್ಡಿ, ಧನಂಜಯ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.