ಸಿರುಗುಪ್ಪ: ‘ವಿಧಾನಸಭಾ ಕ್ಷೇತ್ತ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ಹಾಗೂ ಗರಸು ಅಗೆಯುತ್ತಿರುವ ಬಗ್ಗೆ ಹಾಗೂ ಸರ್ಕಾರ ಅನಧಿಕೃತ ಗಣಿಗಾರಿಕೆ ನಿಲ್ಲಿಸಲು ಕೈಗೊಂಡಿರುವ ಕ್ರಮಗಳೇನು’ ಎಂದು ಶಾಸಕ ಬಿ.ಎಂ.ನಾಗರಾಜ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರನ್ನು ಚುಕ್ಕೆ ಗುರುತಿಲ್ಲದ ಪ್ರಶ್ನೆಯಡಿ ಕೇಳಿದ್ದಾರೆ.
‘ಸಿರುಗುಪ್ಪ ತಾಲ್ಲೂಕು ವ್ಯಾಪ್ತಿಯಲ್ಲಿ ಕಲ್ಲುಗಣಿ ಗುತ್ತಿಗೆ / ಲೈಸೆನ್ಸ್ಗಳನ್ನು ಪಡೆಯದೆ ಅನಧಿಕೃತವಾಗಿ ಗಣಿಗಾರಿಕೆ ನಿರ್ವಹಿಸುತ್ತಿರುವ ಪತ್ತೆ ಹಚ್ಚಲಾಗಿದೆ. ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನು ವಿರುದ್ಧ ಕ್ರಮವಹಿಸಲು ಹಾಗೂ ತಡೆಗಟ್ಟಲು ಕಂದಾಯ, ಅರಣ್ಯ ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿ, ಇವರ ನೇತೃತ್ವದಲ್ಲಿ ಗಸ್ತು ತಂಡಗಳನ್ನು ತಾಲ್ಲೂಕು ಸಮಿತಿಯಿಂದ ರಚಿಸಲಾಗಿದ್ದು, ಗಸ್ತು ಕಾರ್ಯ ನಡೆಸಲಾಗುತ್ತಿದೆ’ ಎಂದು ಸಚಿವರು ಉತ್ತರಿಸಿದ್ದಾರೆ.
2024-25ನೇ ಸಾಲಿನಲ್ಲಿ (ನವೆಂಬರ್-2024ರ ಅಂತ್ಯಕ್ಕೆ) ಅಕ್ರಮ ಗಣಿಗಾರಿಕೆ /ಸಾಗಾಣಿಕೆ/ದಾಸ್ತಾನಿನ 44 - ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ₹9.37 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.