ಕಂಪ್ಲಿ: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಸೋಮಪ್ಪ ಕೆರೆ ಕಾಯಕಲ್ಪಕ್ಕೆ ಕಾಲ ಕೂಡಿ ಬಂದಿದೆ.
ಕೆರೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ₹8.08 ಕೋಟಿ ಬಿಡುಗಡೆಯಾಗಿದೆ.ಒಟ್ಟು 48 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಕೆರೆಯ ಸುತ್ತಲೂ ತಂತಿ ಬೇಲಿ ಜೋಡಿಸುವುದು, ಹೂಳು ತೆಗೆಯುವುದು, ಬಂಡ್ ನಿರ್ಮಾಣ, ಕಲುಷಿತ ನೀರು ಸೇರದಂತೆ ‘ಎಲ್’ ಆಕಾರದಲ್ಲಿ ಚರಂಡಿ ನಿರ್ಮಾಣ, ದೋಣಿ ವಿಹಾರ, ಕೆರೆಯ ಮಧ್ಯಭಾಗದಲ್ಲಿ ಪುಟ್ಟ ದ್ವೀಪ ನಿರ್ಮಾಣ ಹಾಗೂ ರಾಷ್ಟ್ರಧ್ವಜ ಸ್ತಂಭ ನಿರ್ಮಾಣ ಮಾಡುವುದು ಯೋಜನೆಯ ಮೊದಲ ಹಂತದಲ್ಲಿ ಸೇರಿದೆ.
ಎರಡನೇ ಹಂತದಲ್ಲಿ ಕೆರೆ ಮಧ್ಯ ಭಾಗದಲ್ಲಿ ಸೋಮೇಶ್ವರ ವಿಗ್ರಹ ಸ್ಥಾಪನೆ, ಏಳು ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಾಣ, 1.35 ಕಿ.ಮೀ ಉದ್ದದ ವಾಯು ವಿಹಾರ ಪಥ, ವಿದ್ಯುದ್ದೀಕರಣ, ಹೈಮಾಸ್ಟ್ ದೀಪ ಅಳವಡಿಸಲಾಗುತ್ತದೆ. ಕ್ರಿಯಾ ಯೋಜನೆಗೆ ಪುರಸಭೆ ಅನುಮೋದನೆ ನೀಡಿದ್ದು, ಕೆಲಸ ಆರಂಭವಾಗುವುದಷ್ಟೇ ಬಾಕಿ ಉಳಿದಿದೆ.
‘ಸೋಮಪ್ಪ ಕೆರೆಗೆ ಹೊಸ ಮೆರುಗು ಬರುತ್ತಿರುವುದನ್ನು ಪಟ್ಟಣದ ಜನತೆ ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಆದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳಲಿ’ ಎಂದು ಇಲ್ಲಿಯ ರಂಗಭೂಮಿ ಕಲಾವಿದ ಬೂದುಗುಂಪಿ ಹುಸೇನ್ಸಾಬ್ ತಿಳಿಸಿದರು.
ಸೋಮಪ್ಪ ಕೆರೆ ಅಭಿವೃದ್ಧಿಗೆ ಆಗಸ್ಟ್ ಮೂರನೇ ವಾರದಲ್ಲಿ ಟೆಂಡರ್ ಕರೆದು, ಕೊನೆ ವಾರದಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಶಿಲಾನ್ಯಾಸ ನೆರವೇರಿಸಲಾಗುವುದು
– ಎಂ. ಸುಧೀರ್, ಅಧ್ಯಕ್ಷ, ಕಂಪ್ಲಿ ಪುರಸಭೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.