ADVERTISEMENT

ಭಕ್ತರು ಸವಿದರು ರಾಮನಾಮ ಪಾನಕ

ಜಿಲ್ಲೆಯಲ್ಲಿ ಶ್ರೀರಾಮನವಮಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 9:02 IST
Last Updated 13 ಏಪ್ರಿಲ್ 2019, 9:02 IST
ಬಳ್ಳಾರಿಯ ಸೀತಾರಾಮ ಆಶ್ರಮದಲ್ಲಿ ಶನಿವಾರ ಶ್ರೀರಾಮನವಮಿ ಪ್ರಯುಕ್ತ ನಡೆದ ಕಲ್ಯಾಣೋತ್ಸವದಲ್ಲಿ ಮಹಿಳೆಯೊಬ್ಬರು ಶ್ರೀರಾಮನ ಮೂರ್ತಿಗೆ ಕೈಮುಗಿದರು.
ಬಳ್ಳಾರಿಯ ಸೀತಾರಾಮ ಆಶ್ರಮದಲ್ಲಿ ಶನಿವಾರ ಶ್ರೀರಾಮನವಮಿ ಪ್ರಯುಕ್ತ ನಡೆದ ಕಲ್ಯಾಣೋತ್ಸವದಲ್ಲಿ ಮಹಿಳೆಯೊಬ್ಬರು ಶ್ರೀರಾಮನ ಮೂರ್ತಿಗೆ ಕೈಮುಗಿದರು.   

ಬಳ್ಳಾರಿ: ನಗರದಲ್ಲಿ ಶನಿವಾರ ಶ್ರೀರಾಮನವಮಿ ಸಂಭ್ರಮಕ್ಕೆ ಸಾಕ್ಷಿಯಾಯಿತು. ಸಾವಿರಾರು ಭಕ್ತರು ಶ್ರೀರಾಮ ಮತ್ತು ಆಂಜನೇಯ ಗುಡಿಗಳಿಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ಕಲ್ಯಾಣೋತ್ಸವ: ಸಿರುಗುಪ್ಪ ರಸ್ತೆಯ ಗುರುಶಾಂತಪ್ಪ ಬಡಾವಣೆಯ ಸೀತಾರಾಮ ಆಶ್ರಮದಲ್ಲಿ ನಡೆದ ಕಲ್ಯಾಣೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನಡೆಯಿತು. ಉಯ್ಯಾಲೆ ಸೇವೆ, ಸಂಜೆ ಶಯನೋತ್ಸವವನ್ನು ಏರ್ಪಡಿಸಲಾಗಿತ್ತು. ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.

ಎಚ್‌.ಆರ್‌.ಗವಿಯಪ್ಪ ವೃತ್ತದಲ್ಲಿರುವ ಶ್ರೀರಾಮರ ಗುಡಿಯಲ್ಲೂ ವಿಶೇಷ ಪೂಜೆಯಲ್ಲಿ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡರು. ಸೀತಾರಾಮ ಲಕ್ಷ್ಮಣ, ಆಂಜನೇಯ ಮೂರ್ತಿಗಳಿಗೆ ಅಭಿಷೇಕವನ್ನು ಏರ್ಪಡಿಸಲಾಗಿತ್ತು.

ADVERTISEMENT

ಅಖಂಡ ಭಜನೆ:ಉತ್ಸವದ ಪ್ರಯುಕ್ತ ಗುಡಿಯಲ್ಲಿ ಏ.14ರ ಬೆಳಿಗ್ಗೆ 6 ಗಂಟೆಯಿಂದ 15ರ ಬೆಳಿಗ್ಗೆ 6 ಗಂಟೆಯವರೆಗೆ ಅಖಂಡ ಭಜನೆ ನಡೆಯಲಿದೆ. ಸಿಂಧನೂರಿನ ಕರ್ನಾಟಕ ಜಾಣಪದ ತತ್ವಪದ ಸಾಂಸ್ಕೃತಿಕ ಕಲಾತಂಡ, ನಗರದ ನಿಜಗುಣ ಶಿವಯೋಗಿ ತತ್ವಪದ ಜಾನಪದ ಸಾಂಸ್ಕೃತಿಕ ಕಲಾ ತಂಡ, ಕೂಡ್ಲಿಗಿಯ ಸಾಮರಸ್ಯ ಜಾನಪದ ಸಂಗೀತ ಮೇಳ, ಅಲ್ಲೀಪುರದ ಆಂಜನೇಯ ಸ್ವಾಮಿ ಭಜನಾ ಮಂಡಳಿ, ನೀಲಕಂಠೇಶ್ವರ ಸ್ವಾಮಿ ಭಜನಾ ಮಂಡಳಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ.15ರಂದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.

ಬಾಲಾಂಜನೇಯ ಗುಡಿ, ಕುರಹಟ್ಟಿಯ ಆಂಜನೇಯಗುಡಿ, ಶ್ರೀರಾಮಾಂಜನೇಯ ಗುಡಿಯಲ್ಲೂ ವಿಶೇಷ ಪೂಜೆ ನಡೆಯಿತು. ನಗರದ ವಿವಿಧೆಡೆ ಭಕ್ತ ಮಂಡಳಿ ಸದಸ್ಯರು ಸಾರ್ವಜನಿಕರಿಗೆ ಪಾನಕ, ಕೋಸಂಬರಿ ವಿತರಿಸಿದರು.

ನಗರದ ಕೋಟೆ ಆಂಜನೇಯಗುಡಿಯಲ್ಲಿ ಭಾನುವಾರ ಕಲ್ಯಾಣೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.