ಕೊಟ್ಟೂರು: ‘ಶರಣರ ಆದರ್ಶ ಗುಣಗಳು ಸರ್ವಕಾಲಕ್ಕೂ ಮೌಲ್ಯಯುತವಾಗಿರುತ್ತವೆ’ ಎಂದು ಕಟ್ಟೇಮನಿ ಹಿರೇಮಠದ ಯೋಗಿರಾಜೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ತೇರುಗಡ್ಡೆ ಹತ್ತಿರವಿರುವ ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಚಿಕ್ಕೇನಕೊಪ್ಪ ಚನ್ನವೀರ ಶರಣರ 30 ನೇ ಸ್ಮರಣೋತ್ಸವ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಿಕ್ಕೇನಕೊಪ್ಪದ ಶರಣರ ಚಿಂತನೆಗಳು ಎಲ್ಲರ ಸುಂದರ ಬದುಕಿಗೆ ದಾರಿಯಾಗಿವೆ ಎಂದರು.
ಹೂವಿನಹಡಗಲಿ ಗವಿಮಠದ ಹಿರಿಯಶಾಂತವೀರ ಸ್ವಾಮೀಜಿ ಮಾತನಾಡಿ, ‘ಸಂಬಂಧಗಳು ಬೆಸೆಯಬೇಕೇ ವಿನಾ ಕುಸಿಯಬಾರದು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಸದ್ಗುಣ, ಸದ್ವಿಚಾರ ಮೂಡಲು ಸಹಕಾರಿಯಾಗುತ್ತದೆ’ ಎಂದರು.
ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಶಿವಾಚಾರ್ಯರು ಮಾತನಾಡಿ, ‘ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಸೌಹಾರ್ದದಿಂದ ಬದುಕಬೇಕು’ ಎಂದರು.
ಶರಣರ ಬಳಗದ ಗೌರವಾಧ್ಯಕ್ಷ ಬಿ.ಎಸ್. ಕೊಟ್ರೇಶ, ಅಧ್ಯಕ್ಷ ದೇವರಮನಿ ಗುರುರಾಜ್, ಕಾರ್ಯದರ್ಶಿ ದೇವರಮನಿ ಕರಿಯಪ್ಪ, ಕೆ.ಟಿ. ಸಿದ್ಧರಾಮೇಶ್ವರ, ದೇವರಮನಿ ಮಲ್ಲಿಕಾರ್ಜುನ್, ಅಕ್ಕಿ ಚಂದ್ರಣ್ಣ, ಅನುರಾಧಮ್ಮ, ಜಿ. ಸಿದ್ಧಣ್ಣ, ದೇವರಮನಿ ಪಿನಾಕಪಾಣಿ, ಆಡಿಟರ್ ವೀರಯ್ಯ, ಹನುಮಂತಪ್ಪ ಹೊಂಬಾಳೆ ಮಂಜುನಾಥ, ಕೆ.ಕೊಟ್ರೇಶ್ ಇದ್ದರು. 100ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿ ತುಂಬಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.