ಬಳ್ಳಾರಿ: ಬಳ್ಳಾರಿಯ ಪ್ರಮುಖ ಬೆಳೆಗಳಲ್ಲಿ ಮೆಣಸಿನಕಾಯಿ ಪ್ರಧಾನ. ಇಲ್ಲಿ ಬೆಳೆಯುವ ಬೆಳೆಗೆ ಇಲ್ಲೇ ಮಾರುಕಟ್ಟೆ ಕಲ್ಪಿಸಬೇಕು ಎಂಬ ಬೇಡಿಕೆ ಬಹಳ ಹಳೇಯದ್ದು ಕೂಡ. ಅದಕ್ಕಾಗಿಯೇ ಬಳ್ಳಾರಿ ಹೊರ ವಲಯದ ಆಲದಹಳ್ಳಿಯಲ್ಲಿ ಮಾರುಕಟ್ಟೆ ಕಟ್ಟುತ್ತೇವೆ ಎಂದು ಬಜೆಟ್ನಲ್ಲೇ ಹೇಳಿದ್ದ ಸರ್ಕಾರ, ಈಗ ತನ್ನ ಮಾತಿನಿಂದ ಹಿಂದೆ ಸರಿದಿದೆ.
‘ಮಾರುಕಟ್ಟೆ ಸದ್ಯಕ್ಕಿಲ್ಲ. ಮಾರುಕಟ್ಟೆ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಆಲದಹಳ್ಳಿಯಲ್ಲಿ ಒಂದು ಕೋಲ್ಡ್ ಸ್ಟೋರೇಜ್ (ಶೀಥಲಗೃಹ) ನಿರ್ಮಾಣ ಮಾಡಲಾಗುತ್ತಿದೆ’ ಎಂದು ಅಧಿಕೃತವಾಗಿ ಮಂಗಳವಾರ ಹೇಳಿದೆ. ಇದರೊಂದಿಗೆ ಸ್ವಂತದ ಮಾರುಕಟ್ಟೆ ಹೊಂದುವ ಬಳ್ಳಾರಿ ಜಿಲ್ಲೆಯ ಮೆಣಸಿನ ಬೆಳೆಗಾರರ ನಿರೀಕ್ಷೆಗೆ ತಣ್ಣೀರೆರಚಿದೆ. ಜತೆಗೆ, ಮಾರುಕಟ್ಟೆ ಕಟ್ಟಲೇ ಬೇಕು ಎಂಬ ರೈತರ ಹೋರಾಟಗಳನ್ನೂ ಸರ್ಕಾರ ನಿರ್ಲಕ್ಷಿಸಿದೆ.
ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಕಾರ್ಯ ಎಲ್ಲಿಗೆ ಬಂತು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ ಸತೀಶ್ ಮಂಗಳವಾರ ವಿಧಾನ ಪರಿಷತ್ನಲ್ಲಿ ಸರ್ಕಾರಕ್ಕೆ ಚುಕ್ಕೆ ಗುರಿತಿನ ಪ್ರಶ್ನೆ ಕೇಳಿದ್ದರು. ಇದಕ್ಕೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಲಿಖಿತ ರೂಪದಲ್ಲಿ ನಿರಾಶಾದಾಯಕ ಉತ್ತರ ನೀಡಿದ್ದಾರೆ.
ಸಚಿವರ ಉತ್ತರ: ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಮಾಡುವುದಾಗಿ ಸರ್ಕಾರ 2021–22ರ ತನ್ನ ಬಜೆಟ್ನಲ್ಲಿ ಹೇಳಿತ್ತು. ಅದರಂತೆ, ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಆಲದಹಳ್ಳಿ ಗ್ರಾಮದ ಸರ್ವೆ ಸಂಖ್ಯೆ. 25(ಬಿ)ರ ಒಟ್ಟು 23.25 ಎಕರೆ ಜಮೀನನ್ನು ಮಾರುಕಟ್ಟೆ ಉದ್ದೇಶಕ್ಕೆ ಸ್ವಾಧೀನಕ್ಕೆ ಪಡೆಯಲಾಗಿದೆ. ಈ ಜಾಗದಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆಯನ್ನು ಸಾರ್ವಜನಿಕ–ಖಾಸಗಿ ಸಹ ಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು. ಯೋಜನೆಯ ಅನುಷ್ಠಾನಕ್ಕಾಗಿ ಖಾಸಗಿ ಬಂಡವಾಳದಾರರಿಂದ 2022ರ ನ.15 ಮತ್ತು 2022ರ ಡಿ21ರಂದು ಎರಡು ಬಾರಿ ಆಸಕ್ತಿ ಕೋರಲಾಗಿತ್ತು. ಆದರೆ ಯಾರೂ ಆಸಕ್ತಿ ತೋರಲಿಲ್ಲ.
ಈ ಮಧ್ಯೆ, ನಬಾರ್ಡ್ನ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಆರ್ಐಡಿಎಫ್)–30ರ ಅಡಿ, ಆಲದಹಳ್ಳಿಯ ಉದ್ದೇಶಿತ ಒಣಮೆಣಸಿನಕಾಯಿ ಮಾರುಕಟ್ಟೆಗೆ ₹25 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅನುಮೋದನೆ ಕೋರಿ ಎಪಿಎಂಸಿ ನಿರ್ದೇಶಕರು 2024ರ ಮೇ 18ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಪರಿಶೀಲನೆ ಮಾಡಿದ್ದು, ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಸ್ತಾವ ನಿರಾಕರಿಸಿದೆ. ಬದಲಿಗೆ ಮಾರುಕಟ್ಟೆ ಜಾಗದಲ್ಲೇ ₹11.75 ಕೋಟಿ ಅಂದಾಜು ವೆಚ್ಚದಲ್ಲಿ 2,300 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲಗೃಹ ನಿರ್ಮಾಣ ಕಾಮಗಾರಿಯನ್ನು ಅನುಮೋದಿಸಿದೆ.
ಹೊಸ ಒಣಮೆಣಸಿನಕಾಯಿ ಮಾರುಕಟ್ಟೆ ಯೋಜನೆಯನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
‘ಮೂರು ತಿಂಗಳೊಳಗೆ ಸರ್ಕಾರಿ ಅನುದಾನ ಅಥವಾ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ನಿಧಿ ಬಳಸಿ ಮಾರುಕಟ್ಟೆ ನಿರ್ಮಿಸಬೇಕು. ಇಲ್ಲವಾದಲ್ಲಿ ರೈತರೊಂದಿಗೆ ರೈತ ಸಂಘವು ಏಕ ಕಾಲಕ್ಕೆ ಶಾಸಕ, ಸಂಸದರ ಮನೆಗೆ ಮುತ್ತಿಗೆ ಹಾಕಲಿದೆ. ಜೊತೆಗೆ ಜಿಲ್ಲಾಡಳಿತ ಕಚೇರಿಗೆ ಬೀಗ ಹಾಕುವ ಚಳವಳಿಯನ್ನು ಅರಂಭಿಸಬೇಕಾಗುತ್ತದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಿತ್ತು.
ಒಣಮೆಣಸಿನಕಾಯಿ ಧಾರಣೆ ನಿರಂತರವಾಗಿ ಕುಸಿಯುತ್ತಿರುವ ನಡುವೆಯೇ ಸರ್ಕಾರದ ಈ ಉತ್ತರ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ತಾತ್ಕಾಲಿಕ ಮಾರುಕಟ್ಟೆಯೂ ಇಲ್ಲ: ‘ಬಳ್ಳಾರಿ ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರ ಹಿತದೃಷ್ಟಿಯಿಂದ ಹಾಗೂ ದಲ್ಲಾಳಿಗಳ ಮೋಸ ತಪ್ಪಿಸಲು ತಾತ್ಕಾಲಿಕವಾಗಿ ಮಾರುಕಟ್ಟೆಯನ್ನು ಸ್ಥಾಪಿಸಲು ಸಾಧ್ಯವಿಲ್ಲವೇ?. ಯಾವ ಕಾಲಮಿತಿಯಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆಯನ್ನು ಪ್ರಾರಂಭಿಸಲಾಗುವುದು’ ಎಂದೂ ಪರಿಷತ್ ಸದಸ್ಯ ವೈ. ಎಂ ಸತೀಶ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
‘ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಜಿಎಸ್ಟಿ’
‘ಬಳ್ಳಾರಿಯ 5.35 ಲಕ್ಷ ಎಕರೆಯಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ₹6 ಕೋಟಿಯಿಂದ ₹8 ಸಾವಿರ ಕೋಟಿಯನ್ನು ಬೆಳೆ ಬೆಳೆಯಲು ಇಲ್ಲಿನ ರೈತರು ಖರ್ಚು ಮಾಡುತ್ತಾರೆ. ಇದರ ಜಿಎಸ್ಟಿಯೇ ಸಾವಿರಾರು ಕೋಟಿ ರೂಪಾಯಿ ಸರ್ಕಾರಕ್ಕೆ ಹೋಗುತ್ತಿದೆ. ಇಲ್ಲಿಗೊಂದು ಮಾರುಕಟ್ಟೆ ಕಟ್ಟಲು ಆಗಲಿಲ್ಲ ಎಂದರೆ ಸರ್ಕಾರಕ್ಕೆ ನಾಚಿಕೆಯಾಗದೇ? ಇಲ್ಲಿನ ಶಾಕಸರು ಏನು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 35 ಕೋಲ್ಡ್ ಸ್ಟೋರೇಜ್ಗಳಿವೆ. ಅದರ ಜೊತೆಗೆ ಇನ್ನೊಂದು ಅಗತ್ಯವೇ ಇರಲಿಲ್ಲ. ಮಾರುಕಟ್ಟೆ ಇಲ್ಲಿನ ಅಗತ್ಯ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕರೂರು ಮಾಧವ ರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.