ಕೊಟ್ಟೂರು (ವಿಜಯನಗರ ಜಿಲ್ಲೆ): ‘ಪೆಹಲ್ಗಾಮ್ ಪ್ರವಾಸದಲ್ಲಿದ್ದವರನ್ನು ಹತ್ಯೆ ಮಾಡಿರುವುದು ಹೀನ ಕೃತ್ಯ. ಸದ್ಯಕ್ಕೆ ಕದನ ವಿರಾಮ ಘೋಷಣೆ ಸಮರ್ಪಕವಾಗಿದೆ. ಆದರೆ ಇದಕ್ಕೆ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದು ಸರಿಯಲ್ಲ. ಹಾಗಾಗಿ ಇದಕ್ಕೆ ಪ್ರಧಾನಿ ನೇರವಾಗಿ ಜನರಿಗೆ ಉತ್ತರ ನೀಡಬೇಕು’ ಎಂದು ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಖಾಸಗಿ ಕಾರ್ಯಕ್ರಮದ ಪ್ರಯುಕ್ತ ಬುಧವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು, ‘ಬಿಜೆಪಿ ಮುಖಂಡ ಶೆಟ್ಟಿ ತಿಂದಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಈ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸುವ ಕಾಂಗ್ರೆಸ್ಗೆ ನೈತಿಕತೆ ಇಲ್ಲ. ಉಗ್ರರ ಕುರಿತು ಮೃದು ಧೋರಣೆ ಅನುಸರಿಸರಿಸಿಕೊಂಡು ಬಂದ ಕಾಂಗ್ರೆಸ್ ಪಕ್ಷವೇ ಪಾಕಿಸ್ತಾನ ಬಲಿಷ್ಠವಾಗಿ ಬೆಳೆಯಲು ಪರೋಕ್ಷ ಕಾರಣ’ ಎಂದರು.
‘ಇಂದಿನ ಕಲುಷಿತ ರಾಜಕೀಯ ಹಾಗೂ ಭ್ರಷ್ಟ ಸರ್ಕಾರಗಳ ಆಡಳಿತ ವ್ಯವಸ್ಥೆಯಲ್ಲಿ ಹಿಂದೂ ಸಂಘಟನೆ ಬಲಿಷ್ಠವಾಗುವ ಅವಶ್ಯಕತೆ ಇದೆ. ಇಸ್ಲಾಮೀಕರಣಕ್ಕಾಗಿ ಲವ್ ಜಿಹಾದ್ ಸೃಷ್ಟಿಯಾಗಿದೆ. ಲವ್ ಜಿಹಾದ್ ವಿರುದ್ಧ 5 ಪ್ರಕರಣಗಳು ಸುಪ್ರೀಂ ಕೋರ್ಟ್ನಲ್ಲಿವೆ. ಲವ್ ಜಿಹಾದ್ ಹೆಸರಲ್ಲಿ ಮದುವೆಯಾಗಿ ಹೋಗಿದ್ದ 4,760 ಹಿಂದೂ ಯುವತಿಯರನ್ನು ವಾಪಸ್ ಕರೆತಂದು ಅವರ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದೇವೆ. ಲವ್ ಜಿಹಾದ್ ತಡೆಯಲು ಸಹಾಯವಾಣಿ ತೆರೆದು ಸಹಾಯ ಮಾಡುತ್ತಿದ್ದೇವೆ’ ಎಂದರು.
‘ನೇಹಾ ಹಿರೇಮಠ ಕೊಲೆ ನಡೆದು ಒಂದು ವರ್ಷ ಕಳೆದರೂ ಕಾಂಗ್ರೆಸ್ ಸರ್ಕಾರ ಆರೋಪಿಗಳನ್ನು ಬಂಧಿಸಲಿಲ್ಲ’ ಎಂದು ಆರೋಪಿಸಿದ ಅವರು, ‘ವರ್ಷದ ಶ್ರದ್ಧಾಂಜಲಿ ಪ್ರಯುಕ್ತ ಒಂದು ಸಾವಿರ ಯುವತಿಯರಿಗೆ ರಕ್ಷಣೆಗಾಗಿ ತ್ರಿಶೂಲ ದೀಕ್ಷೆ ನೀಡಲಿದ್ದೇವೆ. ಇದಕ್ಕಾಗಿ ರಾಜ್ಯದಾದ್ಯಂತ ನೂರು ಸ್ಥಳಗಳಲ್ಲಿ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದರು.
‘ಗೋವುಗಳ ಸಾಗಣೆಯಿಂದ ಪೊಲೀಸ್ ಇಲಾಖೆ ಹಫ್ತಾ ವಸೂಲಿ ಮಾಡುತ್ತಿದೆ. ಇದನ್ನು ತಡೆಯುವ ನಮ್ಮ ವಿರುದ್ಧ ಕಾಂಗ್ರೆಸ್ ಸರ್ಕಾರ ಪ್ರಕರಣ ದಾಖಲು ಮಾಡಲು ಮುಂದಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮಸೇನೆಯನ್ನು ರಾಜಕೀಯೇತರವಾಗಿ ಸಂಘಟಿಸುತ್ತಿದ್ದೇವೆ. ದೇಶದ ರಕ್ಷಣೆಗಾಗಿ ಮೋದಿ ಅವರನ್ನು ಚುನಾವಣೆ ಸಮಯದಲ್ಲಿ ಬೆಂಬಲಿಸುತ್ತೇವೆ. ಭ್ರಷ್ಟ ಹಾಗೂ ವಂಶಪಾರಂಪರ್ಯ ಆಡಳಿತ ವಿರೋಧಿಸಿ ಶಾಸಕ ಯತ್ನಾಳ್ ಬಹಿರಂಗವಾಗಿ ನೀಡುವ ಎಲ್ಲ ಹೇಳಿಕೆಗಳೂ ಸತ್ಯ ಎಂದರು.
ಬಿಜೆಪಿ ಮುಖಂಡ ಶೆಟ್ಟಿ ತಿಂದಪ್ಪ, ಚೌಡನಗೌಡ, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಡಾ.ಶೆಟ್ಟಿ ರಾಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.