ಕಂಪ್ಲಿ: ‘ಕಲುಷಿತ ತುಂಗಭದ್ರೆಯನ್ನು ನಿರ್ಮಲ ತುಂಗಭದ್ರೆಯನ್ನಾಗಿಸುವ ಸಂಕಲ್ಪದೊಂದಿಗೆ ನಿರ್ಮಲ ತುಂಗಭದ್ರಾ ಅಭಿಯಾನದ ಮೂರನೇ ಹಂತದ ಪಾದಯಾತ್ರೆ ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಪಾಟೀಲ ವೀರಾಪುರ ತಿಳಿಸಿದರು.
ಇಲ್ಲಿಯ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರ್ಯಾಯ ಟ್ರಸ್ಟ್ ಶಿವಮೊಗ್ಗ ಮತ್ತು ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಗಂಗಾವತಿಯ ಕಿಷ್ಕಿಂದೆಯಿಂದ ಮಂತ್ರಾಲಯದವರೆಗೆ ಈ ಪಾದಯಾತ್ರೆ ನಡೆಯಲಿದೆ’ ಎಂದರು.
‘ನದಿ ವ್ಯಾಪ್ತಿಯ ಪಟ್ಟಣ, ಗ್ರಾಮಗಳಲ್ಲಿ ಸಂಸ್ಕರಣ ಘಟಕಗಳು ಇಲ್ಲದ ಕಾರಣ ತ್ಯಾಜ್ಯ ನೀರು ತುಂಗಭದ್ರಾ ನದಿಗೆ ನೇರವಾಗಿ ಸೇರುತ್ತಿದೆ. ಇದರಿಂದ ಆ ಭಾಗದ ಜನರು ನದಿ ನೀರನ್ನು ನೇರವಾಗಿ ಬಳಸಲು ಆಗದಂತಹ ಪರಿಸ್ಥಿತಿ ಎದುರಾಗಿದ್ದು, ದೇಶದಲ್ಲಿ ಅತ್ಯಂತ ಅಪಾಯದಲ್ಲಿರುವ ನದಿಗಳಲ್ಲಿ ತುಂಗಭದ್ರಾ ನದಿಯೂ ಒಂದಾಗಿದೆ. ಈ ಕಾರಣದಿಂದ ಅಭಿಯಾನದ ಮೂಲಕ ಜನ ಮತ್ತು ಜಲ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಪಾದಯಾತ್ರೆಯಲ್ಲಿ ಸಮಾಜದ ಎಲ್ಲ ಸ್ತರದ ಜನರು, ಸಂಘ-ಸಂಸ್ಥೆಗಳು, ಪರಿಸರ ಆಸಕ್ತರು, ತುಂಗಭದ್ರಾ ನೀರು ಬಳಕೆದಾರರು ಅಭಿಯಾನದ ಭಾಗಿದಾರರಾಗಬೇಕೆಂದು ನಮ್ಮ ಅಪೇಕ್ಷೆ. ಈಗಾಗಲೇ ಅನೇಕ ಕಡೆ ಸಂಘ, ಸಂಸ್ಥೆಗಳ ಪ್ರಮುಖರನ್ನು ಭೇಟಿ ಮಾಡಿದಾಗ ಉತ್ತಮ ಪ್ರತಿಕ್ರಿಯೆಯೂ ದೊರೆತಿದೆ’ ಎಂದರು.
ರಾಷ್ಟ್ರೀಯ ಸ್ವಾಭಿಯಾನ ಆಂದೋಲನದ ದಕ್ಷಿಣ ಭಾರತ ಸಂಚಾಲಕ ಟಿ. ಮಾಧವನ್, ನಿರ್ಮಲ ತುಂಗಭದ್ರಾ ಅಭಿಯಾನದ ರಾಜ್ಯ ಸಂಚಾಲಕ ಮಹಿಮಾ ಪಾಟೀಲ್, ಸಮಿತಿ ರಾಯಭಾರಿ ಲಲಿತಾರಾಣಿ ಮಾತನಾಡಿದರು.
ಕೊಪ್ಪಳ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಸೂನಾ, ಕಂಪ್ಲಿ ತಾಲ್ಲೂಕು ಮಾರ್ಗದರ್ಶಕ ಜಂಬುನಾಥ ಗೌಡ, ಎಸ್.ಎಂ. ನಾಗರಾಜಸ್ವಾಮಿ, ಎ.ಸಿ. ದಾನಪ್ಪ, ಬಳ್ಳಾರಿ ರವೀಂದ್ರನಾಥ ಶ್ರೇಷ್ಠಿ, ಶ್ರೀನಿವಾಸ ರೆಡ್ಡಿ, ಭಟ್ಟಾ ರಾಮಾಂಜಿನೇಯ, ಕೆ.ಎಂ. ವಾಗೀಶ, ಎಸ್.ಡಿ. ಬಸವರಾಜ, ಕೊಟ್ಟೂರು ರಮೇಶ, ಕೆ. ತಿಮ್ಮಪ್ಪನಾಯಕ, ಕೆ.ಎಸ್. ದೊಡ್ಡಬಸಪ್ಪ, ಟಿ. ಗಂಗಣ್ಣ, ಕೆ. ಸುದರ್ಶನ, ಮಾಧವರೆಡ್ಡಿ, ಷಣ್ಮುಖಪ್ಪ, ಅಂಚೆ ಮಹ್ಮದ್ಸಾಬ್, ಆದೋನಿ ರಂಗಪ್ಪ, ನಾಗರಾಜ, ಚಂದ್ರಶೇಖರ ಬಣಗಾರ ಇದ್ದರು.
ನದಿಯ ಪಾವಿತ್ರ್ಯತೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಸರ್ವರೂ ಅಭಿಯಾನಕ್ಕೆ ಕೈಜೋಡಿಸಬೇಕುಡಾ. ಶಿವಕುಮಾರ ಮಾಲಿಪಾಟೀ ನಿರ್ಮಲ ಅಭಿಯಾನದ ಜಿಲ್ಲಾ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.