ವಿಜಯನಗರ (ಹೊಸಪೇಟೆ): ‘ಬಳಸದೇ ಇರುವ ನಿರುಪಯುಕ್ತ ವಾಹನಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಬೇಕೆಂಬ ಮನವಿಗೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಚವ್ಹಾಣ್ ತಿಳಿಸಿದರು.
ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಗುರುವಾರ ನಡೆದ ತ್ರೈಮಾಸಿಕ ಸಾರಿಗೆ ಅದಾಲತ್ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕಾಗದ ರಹಿತ ವ್ಯವಹಾರ ನಡೆಯುವುದರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಮೂಲ ದಾಖಲೆ ಹಾಗೂ ಪ್ರಮಾಣ ಪತ್ರಗಳನ್ನು ಸಾರಿಗೆ ಇಲಾಖೆಯ ವೆಬ್ ಸೈಟಿನಲ್ಲಿ ಸೂಚಿಸಿದ ವಿಧಾನದಂತೆ ಸಲ್ಲಿಸಬೇಕು. ಇಲ್ಲವಾದಲ್ಲಿ ಸಮಸ್ಯೆ ಉಂಟಾಗುತ್ತದೆ’ ಎಂದು ಹೇಳಿದರು.
ಅನುಪಯುಕ್ತ ವಾಹನಗಳಿಗೆ ತೆರಿಗೆ ವಿನಾಯತಿ ನೀಡಬೇಕು. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ವಿಧಿಸಿದ್ದ ತೆರಿಗೆ ವಿನಾಯತಿ ಅವಧಿಯನ್ನು ಹೆಚ್ಚಿಸಬೇಕು. ಕಚೇರಿಯಲ್ಲಿ ಗ್ರಾಹಕರಿಗೆ ಮತ್ತು ಮಧ್ಯವರ್ತಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಕಲಿಕಾ, ಚಾಲನಾ ಪರವಾನಗಿ ಪರೀಕ್ಷಾ ಅರ್ಜಿ ಸಂಖ್ಯೆಯ ದಿನ ಹೆಚ್ಚಿಸಬೇಕೆಂದು ಮಧ್ಯವರ್ತಿಗಳು ಮನವಿ ಮಾಡಿದರು.
ಮೋಟಾರು ವಾಹನ ಸೂಪರಿಟೆಂಡೆಂಟ್ ಪ್ರದೀಪ್ ಹಡಗಲಿ, ಸಿಬ್ಬಂದಿ ಅಡವೀಶ್ವರ ಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.