ADVERTISEMENT

‘ವಚನ ಸಾಹಿತ್ಯ ನಾಶ ಸುಲಭವಲ್ಲ’

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 1:40 IST
Last Updated 8 ಅಕ್ಟೋಬರ್ 2019, 1:40 IST
ಉದ್ಯಮಿ ವಿಜಯಕುಮಾರ ಹಿರೇಮಠ ತಬಲ ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದರು
ಉದ್ಯಮಿ ವಿಜಯಕುಮಾರ ಹಿರೇಮಠ ತಬಲ ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದರು   

ಹೊಸಪೇಟೆ: ‘ಮನುಷ್ಯ ಮನುಷ್ಯನ ನಡುವಿನ ಸಂಬಂಧದ ಬಗ್ಗೆ ಹೇಳುವ ವಚನ ಸಾಹಿತ್ಯವನ್ನು ನಾಶಗೊಳಿಸುವುದು ಸುಲಭವಲ್ಲ. ಅದು ಎಂದಿಗೂ ನಾಶಗೊಳ್ಳುವುದಿಲ್ಲ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಕೆ. ರವೀಂದ್ರನಾಥ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕವು ನಗರದ ಚಿತ್ತವಾಡ್ಗಿಯಲ್ಲಿ ಹಮ್ಮಿಕೊಂಡಿದ್ದ ‘ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯದ ಸಂರಕ್ಷಣೆ’ ಕುರಿತು ಮಾತನಾಡಿದ ಅವರು, ‘ವಚನಗಳ ಸಂರಕ್ಷಣೆಗೆ ದೊಡ್ಡ ಇತಿಹಾಸವಿದೆ. ಶರಣರ ತ್ಯಾಗ, ಬಲಿದಾನದಿಂದ ಅದು ಉಳಿದಿದೆ’ ಎಂದರು.

‘ಕಲ್ಯಾಣ ಕ್ರಾಂತಿಯ ನಂತರ ಹಲವು ಶರಣರು ತಮ್ಮ ವಚನಗಳನ್ನು ಉಡಿಯಲ್ಲಿ, ರುಮಾಲುಗಳಲ್ಲಿ, ಶಾಲು-ವಸ್ತ್ರಗಳಲ್ಲಿ ಸುತ್ತಿಟ್ಟುಕೊಂಡು ಹುಬ್ಬಳ್ಳಿ, ಮುರುಗೋಡು ಮೂಲಕ ಉಳಿವಿಗೆ ಹೋಗಿದ್ದಾರೆ. ಅವರು ಹೋದ ದಾರಿಯನ್ನು ದಂಡಿನ ದಾರಿ ಎಂದು ಹಲವು ವಿದ್ವಾಂಸರು ಕರೆದಿದ್ದಾರೆ. ಕೆಳದಿಯಲ್ಲಿದ್ದ ಬೂದಿ ಬಸಪ್ಪ ನಾಯಕ, ಆಂಧ್ರ ಕಾಕತೀಯ ಅರಸ ಮುಂತಾದವರು ವಚನ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ವಿಜಯನಗರ ಪ್ರೌಢದೇವರಾಯನ ಕಾಲದಲ್ಲಿ ವಚನ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಧಾರ್ಮಿಕ ಒತ್ತಾಸೆ ಇದ್ದಿದ್ದರಿಂದ, ವಚನ ಸಾಹಿತ್ಯ ಉಳಿದು ಬಂದಿದೆ. ವರ್ಗ ರಹಿತ, ವರ್ಣ ರಹಿತ, ಲಿಂಗ ರಹಿತ ಸಮಾಜದ ಕಲ್ಪನೆಯನ್ನು ಶರಣರು ಕಟ್ಟಬಯಸಿದರು. ಅವರು ಸಮ ಸಮಾಜದ ಕಲ್ಪನೆ ಇಟ್ಟುಕೊಂಡು ಸಕಲ ಜೀವಾತ್ಮರಿಗೆ ಲೇಸು ಬಯಸಿದ್ದರಿಂದಲೇ ವಚನಗಳು ಉಳಿದುಕೊಂಡಿವೆ’ ಎಂದು ತಿಳಿಸಿದರು.

ಉದ್ಯಮಿ ವಿಜಯಕುಮಾರ ಹಿರೇಮಠ ಉದ್ಘಾಟಿಸಿದರು. ಅರಳಿ ಕೊಟ್ರಪ್ಪ, ದಯಾನಂದ ಕಿನ್ನಾಳ್ , ದತ್ತಿದಾನಿ ಸೋ.ದ.ವಿರುಪಾಕ್ಷಗೌಡ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ,ಕಾರ್ಯದರ್ಶಿ ಎಚ್‌.ಎಂ. ಜಂಬುನಾಥ, ಕೆ.ಬಸವರಾಜ, ಕೆ.ವಾಸುದೇವ, ಭೂಮಿಕಾ ಗಡಾದ, ಎ.ಗೌತಮಿ, ಎಚ್‌.ಎಂ. ಲೋಹಿತಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.