ಮನುಷ್ಯ ತನ್ನ ಪರಿಸರದಲ್ಲಿ ಸಂವೇದನಾಶೀಲ ಬದುಕು ಕಟ್ಟಿಕೊಳ್ಳುವುದು ಅವಶ್ಯ. ಆತನ ಗ್ರಹಿಕೆ, ಆಲೋಚನೆಗಳು ಆತನ ವ್ಯಕ್ತಿತ್ವ ನಿರ್ಧರಿಸುತ್ತವೆ. ಸಮಾಜದ ಎಲ್ಲ ಸ್ತರದ ಕಾರ್ಯಗಳಿಗೆ ಆತನು ಬಳಕೆಯಾಗುತ್ತಾನೆ. ಆಧ್ಯಾತ್ಮದ ಒಡನಾಟ, ಸತ್ಸಂಗದಿಂದ ಅನುಭವ ಮತ್ತು ಅನುಭಾವ ವಿಸ್ತಾರಗೊಳ್ಳುತ್ತದೆ. ಒಳ್ಳೆಯ ಪರಿಸರದಲ್ಲಿ ಸಾಗಿದಂತೆ ಕೆಟ್ಟ ಆಲೋಚನೆಗಳು ದೂರವಾಗುತ್ತವೆ. ಅದಕ್ಕೆ ಸಿದ್ಧಲಿಂಗೇಶ್ವರರು ತಮ್ಮ ಜ್ಞಾನ ಜ್ಯೋತಿಯ ಮೂಲಕ ಎಲ್ಲವನ್ನು ಪಡೆಯಬಹುದು ಎಂಬುದನ್ನು ಈ ವಚನದಲ್ಲಿ ಹೇಳಿದ್ದಾರೆ. ‘ಸುಧೆಯೊಳಗೆ ವಿಷವುಂಟೆ? ಮಧುರದೊಳಗೆ ಕಹಿಯುಂಟೆ? ದಿನಮಣಿಯೊಳಗೆ ಕಪ್ಪುಂಟೆ? ಬೆಳದಿಂಗಳೊಳಗೆ ಕಿಚ್ಚುಂಟೆ? ಅಮೃತ ಸಾಗರದೊಳಗೆ ಬೇವಿನ ಬಿಂದುವುಂಟೆ? ಮಹಾಜ್ಞಾನ ಸ್ವರೂಪರಪ್ಪ ಶರಣರೇ ಲಿಂಗವೆಂದರಿದ ಮಹಾತ್ಮಂಗೆ ಸಂಕಲ್ಪ ಭ್ರಮೆಯುಂಟೆ? ಅದೇತರ ವಿಶ್ವಾಸ? ಸುಡು ಸುಡು ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ‘ ಈ ವಚನವು ಸತ್ಯದೊಳಗಿನ ಪ್ರಸನ್ನತೆಯನ್ನು ತಿಳಿಸುತ್ತದೆ. ಭೇದಭಾವ ಎಣಿಸದಿದ್ದರೆ ಎಲ್ಲವೂ ಹೊಸಚಿಗುರು.
ಸುಧೆ, ಜೇನು, ದೀಪ, ಅಮೃತ, ಸಮಾನ ಜ್ಞಾನ ಇದರಲ್ಲಿ ಹರಳು ಹುಡುಕುವುದು ಸಲ್ಲದು. ‘ಪ್ರೀತಿ ಇಲ್ಲದ ಮೇಲೆ ಹೂ ಅರಳಿತು ಹೇಗೆ? ಮೋಡ ಕಟ್ಟೀತು ಹೇಗೆ? ಹನಿಯೊಡೆದು, ಕೆಳಗಿಳಿದು, ನೆಲಕೆ ಹಸಿರು ಮೂಡಿತು ಹೇಗೆ? ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಈ ಕವಿತೆಯ ಮೂಲಕ ಪ್ರೀತಿಯನ್ನು ವ್ಯಾಖ್ಯಾನಿಸಿದ್ದಾರೆ. ಪ್ರೀತಿ, ಪ್ರೇಮ ಬರೀ ಯುವ ಮನಸ್ಸುಗಳ ಆಕರ್ಷಣೆಯಲ್ಲಿ ಹುಟ್ಟುವಂಥದಲ್ಲ. ತಾಯಿ-ಮಗುವಿನ ನಡುವೆ ಹುಟ್ಟುವಂಥದ್ದು, ಗುರು ಶಿಷ್ಯರ ನಡುವೆ ಮೂಡುವಂಥದ್ದು ಪ್ರೀತಿಯಾಗಿರುತ್ತದೆ. ಪ್ರೀತಿ, ವಿಶ್ವಾಸ ಗಟ್ಟಿಯಾಗಿ ನೆಲೆಯೂರಿದ ಜಾಗದಲ್ಲಿ ಆನಂದ ತುಂಬಿರುತ್ತದೆ. ಪರಸ್ಪರರಲ್ಲಿ ಅಂದ ಗುಣ, ಲಿಂಗ ಗುಣ, ಅನುಪಮ ಸ್ನೇಹ ಮೂಡಿದಾಗ ಲೋಕದ ಭ್ರಾಂತಿ ಮರೆಯಾಗುತ್ತದೆ.
-ಹಿರಿಶಾಂತವೀರ ಸ್ವಾಮೀಜಿ, ಗವಿಮಠ, ಹೂವಿನಹಡಗಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.