ADVERTISEMENT

ಬಳ್ಳಾರಿ | ವಿಜಯ ಸಂಕಲ್ಪ ಯಾತ್ರೆ: ಬಿಜೆಪಿಗೆ ಪೂರ್ಣ ಬಹುಮತ ನೀಡಿ– ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 11:37 IST
Last Updated 23 ಫೆಬ್ರುವರಿ 2023, 11:37 IST
ವಿಜಯ ಸಂಕಲ್ಪ ಯಾತ್ರೆ
ವಿಜಯ ಸಂಕಲ್ಪ ಯಾತ್ರೆ   

ಬಳ್ಳಾರಿ: ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಡುತ್ತಿರುವ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ; ಒಂದು ಸಲ ಮೋದಿ ಮತ್ತು ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಟ್ಟು ಬಿಜೆಪಿಗೆ ಬಹುಮತ ನೀಡಿ. ಕರ್ನಾಟಕವನ್ನು ಭ್ರಷ್ಟಚಾರ ಮುಕ್ತ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಇಲ್ಲಿನ ಎಸ್‌ಆರ್‌ಎಸ್‌ ಮೈದಾನದಲ್ಲಿ ಗುರುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ತರಲು ಸಂಕಲ್ಪ ಮಾಡಿ ಎಂದು ಜನರಿಗೆ ಮನವಿ ಮಾಡಿದರು.

ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದರೆ ಕರ್ನಾಟಕವನ್ನು ದಕ್ಷಿಣ ಭಾರತದಲ್ಲಿ ನಂ.1 ರಾಜ್ಯ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತುಕಡೆ ತುಕಡೆ ಗ್ಯಾಂಗ್ ಕಟ್ಟಿಕೊಂಡು ದೇಶ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸುಭದ್ರ ಸರ್ಕಾರ ನೀಡುವ ಮೂಲಕ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.

ADVERTISEMENT

ಜೆಡಿಎಸ್‌ಗೆ ನೀವು ಕೊಡುವ ಒಂದೊಂದು ವೋಟು ಕಾಂಗ್ರೆಸ್‌ಗೆ ಹೋಗಲಿದೆ. ಕಾಂಗ್ರೆಸ್‌ಗೆ ಕೋಡುವ ಒಂದೊಂದು ವೋಟು ಸಿದ್ದರಾಮಯ್ಯ ಅವರ ಎಟಿಎಂ ಸರ್ಕಾರಕ್ಕೆ ಹೋಗಲಿದೆ ಎಂದು ಟೀಕಿಸಿದರು. ಕುಟುಂಬ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿವೆ. ಪ್ರಜಾಪ್ರಭುತ್ವದಲ್ಲಿ ಕುಟುಂಬ ರಾಜಕಾರಣ ಮಾಡುವ ಯಾವುದೇ ಪಕ್ಷದಿಂದ ಜನರ ಕಲ್ಯಾಣ ಸಾಧ್ಯವಿಲ್ಲ ಎಂದು ನುಡಿದರು.

ಮೋದಿಜೀ ದೇಶದ ಸಂರಕ್ಷಣೆಗೆ ಬದ್ಧರಾಗಿದ್ದಾರೆ. ಕೇಂದದಲ್ಲಿ 10 ವರ್ಷ ಅಧಿಕಾರ ನಡೆಸಿದ ಯುಪಿಎ ಸರ್ಕಾರಕ್ಕೆ ಪಾಕಿಸ್ತಾನಕ್ಕೆ ಬುದ್ಧಿಕಲಿಸಲು ಆಗಲಿಲ್ಲ. ಆದರೆ ನಮ್ಮ ಸರ್ಕಾರ ಪುಲ್ವಾಮದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಎಂದು ತಿಳಿಸಿದರು.

ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಪಡಿಸಲು ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ ಮೋದಿಜೀ 370ನೇ ವಿಧಿ ರದ್ದು ಪಡಿಸಿ ಕಾಶ್ಮೀರವನ್ನು ಭಾರತದಲ್ಲಿ ಜೋಡಿಸುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಮುಂಖಡ ರಾಹುಲ್ ಗಾಂಧಿ ತುಕಡೆ ತುಕಡೆ ಗ್ಯಾಂಗ್ ಕಟ್ಟಿಕೊಂಡು ದೇಶ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ಹಕ್ಕಬುಕ್ಕ, ಕೃಷ್ಣದೇವರಾಯರ ಸ್ಮರಣೆ

ಬಿಜೆಪಿ ಬಹಿರಂಗ ಸಭೆಗೆ ಸಿದ್ದಪಡಿಸಿದ ಶ್ರೀಕ್ಷೇತ್ರ ಸ್ಕಂದಗಿರಿ ವೇದಿಕೆಗೆ ಆಗಮಿಸಿದ ಅಮಿತ್ ಶಾ ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ಸಂಡೂರು ಕುಮಾರಸ್ವಾಮಿ, ವಿಠೋಬ ದೇವರಿಗೆ ನಮಸ್ಕರಿಸಿದರು. ಇದು ಹಕ್ಕಬುಕ್ಕರ ಭೂಮಿ, ಶ್ರೀಕೃಷ್ಣ ದೇವರಾಯರ ನಾಡು. ಯಶವಂತರಾವ್ ಘೋರ್ಪಡೆ ಬದುಕಿ ಬಾಳಿದ ನೆಲದಲ್ಲಿ ನಿಂತು ಮಾತನಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಆಗಿದೆ ಎಂದು ಸ್ಮರಿಸಿದರು.

ರಾಮಮಂದಿರ ಬೇಕೆ ಬೇಡವೇ? 370ವಿಧಿ ರದ್ದಾಗಬೇಕೆ ಬೇಡವೇ? ಎಂದು ಪ್ರಶ್ನಿಸಿದರು. ಅದಕ್ಕೆ ಸಭಿಕರು ರಾಮಮಂದಿರ ಬೇಕು. 370ನೇ ವಿಧಿ ರದ್ದು ಮಾಡಬೇಕು ಎಂದು ಪ್ರತಿಕ್ರಿಯಿಸಿದರು. ಈ ಎರಡು ಕೆಲಸವನ್ನು ಮೋದಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.