ಹೊಸಪೇಟೆ: ಮನೆ ಮನೆಗೆ ತೆರಳಿ, ಮಹಿಳಾ ಮತದಾರರಿಗೆ ಹೂ, ಅರಿಶಿಣ ಕುಂಕುಮ ಕೊಟ್ಟು, ಕಾಂಗ್ರೆಸ್ ಕಾರ್ಯಕರ್ತೆಯರು ಭಾನುವಾರ ನಗರದಲ್ಲಿ ವಿನೂತನ ರೀತಿಯಲ್ಲಿ ಮತ ಯಾಚಿಸಿದರು.
ಕೆ.ಪಿ.ಸಿ.ಸಿ. ಮಹಿಳಾ ಘಟಕದ ಕಾರ್ಯದರ್ಶಿ ಕವಿತಾ ಈಶ್ವರ್ ಸಿಂಗ್ ನೇತೃತ್ವದಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ಪ್ರಚಾರ ಕಾರ್ಯ ಕೈಗೊಂಡರು. ರಸ್ತೆಬದಿಯ ಗೂಡಂಗಡಿ, ಮನೆಗಳಿಗೆ ತೆರಳಿ ಮಹಿಳೆಯರ ಕೈಗೆ ಹೂ ಕೊಟ್ಟರು. ನಂತರ ಅವರ ಹಣೆಗೆ ಅರಿಶಿಣ ಕುಂಕುಮ ಹಚ್ಚಿ, ಕರಪತ್ರ ಕೊಟ್ಟು, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
‘ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಯಾವ ಹಬ್ಬಕ್ಕಿಂತ ಕಡಿಮೆಯೇನಿಲ್ಲ. ಮಹಿಳಾ ಮತದಾರರನ್ನು ನೇರವಾಗಿ ತಲುಪಲು, ಅವರಲ್ಲಿ ಅರಿವು ಮೂಡಿಸಲು ವಿನೂತನವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಕವಿತಾ ಈಶ್ವರ್ ಸಿಂಗ್ ಪ್ರತಿಕ್ರಿಯಿಸಿದರು.
ಗಾಂಧಿ ವೃತ್ತದಿಂದ ಆರಂಭವಾದ ಪ್ರಚಾರ ಕಾರ್ಯ ಮೇನ್ ಬಜಾರ್ ಹಾಗೂ ನಗರದ ಏಳು ಕೇರಿಗಳಲ್ಲಿ ಜರುಗಿತು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಕಾಂಗ್ರೆಸ್ ಕಾರ್ಯಕರ್ತರು ಬಿರುಸಿನ ಪ್ರಚಾರ ಮಾಡಿದರು.
ಮುಖಂಡರಾದ ರಫೀಕ್ ಟಿಂಕರ್, ಮುನ್ನಿ ಕಾಸೀಂ, ಬಾನು ಬೀ, ರಜೀಯಾ ಬೇಗಂ, ದಾದಾ ಕಲಂದರ್, ಮಧುರ ಚೆನ್ನ ಶಾಸ್ತ್ರಿ, ನಿಂಬಗಲ್ ರಾಮಕೃಷ್ಣ, ರಾಮಾಂಜಿನಿ, ಗೌಸ್, ರೂಪಾ ಕುಲಕರ್ಣಿ, ಜಂಬುನಾಥ, ವಿನಾಯಕ ಶೆಟ್ಟರ್, ರೇಣುಕಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.