ಹೊಸಪೇಟೆ: ‘ವೀರಶೈವ ವಿದ್ಯಾವರ್ಧಕ ಸಂಘವು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ, ಆ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದೆ. ಜಿಲ್ಲೆಯ ವಿವಿಧ ಕಡೆ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿರುವುದರಿಂದ ಅನೇಕ ಜನ ವಿದ್ಯಾವಂತರಾಗಲು ಸಾಧ್ಯವಾಗಿದೆ’ ಎಂದು ಸಂಘದ ಮಾಜಿ ಅಧ್ಯಕ್ಷ ಅಲ್ಲಂ ಗುರುಬಸವರಾಜ ಹೇಳಿದರು.
ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮಾಲೆ ಉದ್ಘಾಟಿಸಿ ಮಾತನಾಡಿದರು.
‘ಸಂಘಕ್ಕೆ ಶೈಕ್ಷಣಿಕ ಘನತೆ, ಸಾಮಾಜಿಕ ಗೌರವ ತಂದುಕೊಟ್ಟಿರುವ ರಾವ ಬಹದ್ದೂರ್ ವೈ. ಮಹಾಬಲೇಶ್ವರಪ್ಪ, ಸಂಘದ ಅಧ್ಯಕ್ಷರಾಗಿದ್ದ ನನ್ನ ತಂದೆ ಅಲ್ಲಂ ಕರಿಬಸಪ್ಪ ಸೇರಿದಂತೆ ಇತರೆ ಮಹನೀಯರ ಸಮಾಜಮುಖಿ ಚಿಂತನೆಯಿಂದ ಈ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ’ ಎಂದರು.
‘ನಾಡಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ವಿದ್ಯಾವರ್ಧಕ ಸಂಘ ಮತ್ತು ಅದರ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಲು ಶ್ರಮಿಸಿದ ಮಹನೀಯರ ಸ್ಮರಣೆ ನಿರಂತರವಾಗಿ ನಡೆಯಬೇಕು.ನಿರಂತರವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಮಾತನಾಡಿ, ‘ಬಡವರ ಮಕ್ಕಳು, ಮಹಿಳೆಯರು ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಬೇಕೆಂದು ಜಿಲ್ಲೆಯ ವಿವಿಧ ಕಡೆ ಸಂಘದ ಹಿಂದಿನ ಅಧ್ಯಕ್ಷರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಅವುಗಳನ್ನು ನಿರಂತರವಾಗಿ ಘನತೆಯಿಂದ ನಡೆಸಿಕೊಂಡು ಹೋಗುವ ಜವಾಬ್ದಾರಿ ಹೊಸ ತಲೆಮಾರಿನ ಮೇಲಿದೆ’ ಎಂದರು.
ಪ್ರಾಚಾರ್ಯ ವಿ.ಎಸ್.ಪ್ರಭಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ, ವಿ.ಎಸ್.ಕೆ. ವಿ.ವಿ. ನಿವೃತ್ತ ಪ್ರಭಾರ ಕುಲಪತಿ ಎಸ್.ಜಯಣ್ಣ, ಬಳ್ಳಾರಿ ಜಿಲ್ಲಾ ವಿಜ್ಞಾನ ಕೇಂದ್ರದ ಪಿ.ನಾಗಭೂಷಣ, ಪ್ರಾಧ್ಯಾಪಕ ಜೆ.ಕೃಷ್ಣ, ಕಾರ್ಯಕ್ರಮದ ಸಂಚಾಲಕ ಮೃತ್ಯುಂಜಯ ರುಮಾಲೆ, ಪ್ರಭುಗೌಡ,ಗೋವಿಂದರಾಜು, ಲಕ್ಷ್ಮಣ ಕರಿಭೀಮಣ್ಣವರ್, ಬಸವರಾಜ, ಭಾರತಿ, ಲೋಕನಾಥ, ಆನಂದ್ ಹಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.