ADVERTISEMENT

‘ವಾರದ ಪರಿಕಲ್ಪನೆ ಹಾಲುಮತದ ಕೊಡುಗೆ’

​ಪ್ರಜಾವಾಣಿ ವಾರ್ತೆ
Published 22 ಮೇ 2019, 13:58 IST
Last Updated 22 ಮೇ 2019, 13:58 IST
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಎಂ. ಪಾಟೀಲ ಮಾತನಾಡಿದರು
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಎಂ. ಪಾಟೀಲ ಮಾತನಾಡಿದರು   

ಹೊಸಪೇಟೆ: ‘ವಾರದ ಪರಿಕಲ್ಪನೆ ಹುಟ್ಟಿಕೊಂಡದ್ದು ಹಾಲುಮತ ಸಮುದಾಯದಿಂದ’ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಎಂ. ಪಾಟೀಲ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಾಲುಮತ ಅಧ್ಯಯನ ಪೀಠದಿಂದಹಮ್ಮಿಕೊಂಡಿದ್ದ ಹಾಲುಮತ ಮಂಟಪದ ಉದ್ಘಾಟನೆ ಹಾಗೂ ‘ಕುರುಬ ಸಮುದಾಯ; ಸಾಂಸ್ಕೃತಿಕ ಅನನ್ಯತೆ’ ಕುರಿತು ಉಪನ್ಯಾಸ ನೀಡಿದರು.

‘ಹಾಲುಮತ ಸಮುದಾಯದ ಜನರು ಒಂದು ನಿರ್ದಿಷ್ಟ ಸ್ಥಳದ ವಾಸಿಗಳಲ್ಲ. ಅವರು ಅಲೆಮಾರಿಗಳಾಗಿದ್ದರು. ಅನೇಕ ಕಸುಬು ಮಾಡುವ ಮೂಲಕ ಅಂಬಿಗ, ಗಂಗಾಮತ, ಹಾಲುಮತ, ಕುರುಬ, ಕುಂಚಿಟಿಗ, ಪಂಚಮಸಾಲಿ ಸೇರಿದಂತೆ ಇತರೆ 40ಕ್ಕೂ ಹೆಚ್ಚು ಉಪಜಾತಿಗಳು ಹುಟ್ಟಿಕೊಂಡವು’ ಎಂದು ವಿವರಿಸಿದರು.

ADVERTISEMENT

‘ಹಾಲುಮತ ಒಂದು ಬುಡಕಟ್ಟು ಸಮುದಾಯ. ಇಂತಹ ವಿಚಾರಗಳನ್ನು ತಿಳಿದುಕೊಳ್ಳಲು ಸಂಶೋಧಕರು ಆಸಕ್ತಿ ತೋರುತ್ತಿಲ್ಲ. ಆಸಕ್ತಿಯ ಮೂಲಕ ಹೊಸ ವಿಚಾರಗಳನ್ನು ಮತ್ತು ಮೂಲಗಳನ್ನು ತಿಳಿದುಕೊಳ್ಳಲು ಸಾಧ್ಯ’ ಎಂದರು.

ಕುಲಪತಿ ಪ್ರೊ. ಸ.ಚಿ. ರಮೇಶ, ‘ಮಂಟಪ ಎನ್ನುವ ಪರಿಕಲ್ಪನೆಯನ್ನು 12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದರು. ಅವರು ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಿಳಿಸುವ ಕಾಯಕದಲ್ಲಿ ಅನ್ಯ ಜಾತಿಗಳ ಜನರನ್ನು ಒಗ್ಗೂಡಿಸಿ ಅನುಭವ ಮಂಟಪದಲ್ಲಿ ಸಮ ಸಮಾಜ ನಿರ್ಮಾಣ ಹಾಗೂ ಸಮಾನತೆ ತರಲು ಶ್ರಮಿಸಿದರು’ ಎಂದು ಹೇಳಿದರು.

ಕುಲಸಚಿವ ಎ. ಸುಬ್ಬಣ್ಣ ರೈ,ಪೀಠದ ಸಂಚಾಲಕ ಎಫ್.ಟಿ.ಹಳ್ಳಿಕೇರಿ,ಸಮಾಜ ವಿಜ್ಞಾನ ನಿಕಾಯದ ಡೀನ್ ಕೇಶವನ್ ಪ್ರಸಾದ್, ಉಪಕುಲಸಚಿವ ಎ. ವೆಂಕಟೇಶ, ಹಾಲುಮತ ಸಲಹಾ ಸಮಿತಿಯ ಸದಸ್ಯರಾದ ಎನ್.ಎಂ. ಅಂಬಲಿ, ಸಂಶೋಧನಾ ವಿದ್ಯಾರ್ಥಿಗಳಾದಬಾಣದ ಬೀರಪ್ಪ, ಸಂತೋಷ್ ಕುಮಾರ, ಸ್ವಾಮಿಲಿಂಗ ಹಾವಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.