ಹೂವಿನಹಡಗಲಿ: ‘ದೇಶವು ಆಹಾರ ಸ್ವಾವಲಂಬನೆ ಸಾಧಿಸುವಲ್ಲಿ ರೈತರ ಕೊಡುಗೆ ಮುಖ್ಯವಾಗಿದೆ’ ಎಂದು ಕೃಷಿಕ ಸಮಾಜದ ಅಧ್ಯಕ್ಷ ಪಿ.ವಿ.ಬಸವರಾಜ ಹೇಳಿದರು.
ಪಟ್ಟಣದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಶುಕ್ರವಾರ ‘ವಿಶ್ವ ಆಹಾರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ರೈತರು ಲಾಭ, ನಷ್ಟದ ಅರಿವು ಇಲ್ಲದೇ ಜನರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆಗೂ ಗುಣಮಟ್ಟದ ಆಹಾರ ಸಿಗಬೇಕಾದರೆ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ರೈತರು ಕೃಷಿಯಿಂದ ವಿಮುಖರಾಗದೇ ಹೊಸ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು’ ಎಂದು ತಿಳಿಸಿದರು.
ವಿಸ್ತರಣಾ ಮುಂದಾಳು ಡಾ. ಸಿ.ಎಂ.ಕಾಲಿಬಾವಿ ಮಾತನಾಡಿ, ದೇಶದ ಜನರಿಗೆ ಗುಣಮಟ್ಟದ ಆಹಾರ ಉಣಬಡಿಸುವ ರೈತರ ಕಾರ್ಯವನ್ನು ಎಲ್ಲರೂ ಸ್ಮರಿಸಬೇಕು. ಆಹಾರವನ್ನು ಮಿತವಾಗಿ ಬಳಸುವುದರಿಂದ ದೇಶ ಸದೃಢವಾಗುತ್ತದೆ. ನಿತ್ಯ ಆಹಾರದಲ್ಲಿ ಸಿರಿಧಾನ್ಯಗಳಾದ ನವಣೆ, ರಾಗಿ, ಸಜ್ಜೆ, ಕೊರಲು, ಬರಗು ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಕೃಷಿ ವಿಜ್ಞಾನಿಗಳಾದ ಎನ್.ಎಚ್.ಸುನೀತಾ, ಡಾ. ಮಂಜುನಾಥ ಭಾನುವಳ್ಳಿ, ಪ್ರಗತಿಪರ ರೈತರಾದ ಅನ್ನದಾನಸ್ವಾಮಿ, ಮಲ್ಲಿಕಾರ್ಜುನಗೌಡ, ವಿಜಯಲಕ್ಷ್ಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.