ADVERTISEMENT

ಅಕ್ರಮ ಮರಳುಗಾರಿಕೆ : ಯಂತ್ರೋಪಕರಣಗಳು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2011, 19:30 IST
Last Updated 30 ಸೆಪ್ಟೆಂಬರ್ 2011, 19:30 IST
ಅಕ್ರಮ ಮರಳುಗಾರಿಕೆ : ಯಂತ್ರೋಪಕರಣಗಳು ವಶಕ್ಕೆ
ಅಕ್ರಮ ಮರಳುಗಾರಿಕೆ : ಯಂತ್ರೋಪಕರಣಗಳು ವಶಕ್ಕೆ   

ದೇವನಹಳ್ಳಿ: ದೇವನಹಳ್ಳಿಯ ವಿವಿಧೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು `ಪ್ರಜಾವಾಣಿ~ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೆ ಉಪ ತಹಶೀಲ್ದಾರ್ ರಾಮಲಿಂಗಪ್ಪ ಅವರ ನೇತೃತ್ವದ ತಂಡ ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ದಾಳಿ ನಡೆಸಿದ್ದು, ಮರಳುಗಾರಿಕೆಗೆ ಬಳಸಲಾಗುತ್ತಿದ್ದ ವಾಹನ, ಫಿಲ್ಟರ್ ಹಾಗೂ ಯಂತ್ರಗಳನ್ನು ವಶಪಡಿಸಿಕೊಂಡಿದೆ.

ದಾಳಿ ನಡೆಸಿದ ತಂಡದಲ್ಲಿ ಆರ್.ಐ.ರಂಗಗಾಜು, ಗ್ರಾಮ ಲೆಕ್ಕಿಗರಾದ ರಮೇಶ್, ಮಹೇಶ್, ನಾಗಣ್ಣ, ವೆಂಕಟೇಶ್, ಬೈರಪ್ಪ, ನಾರಾಯಣಸ್ವಾಮಿ ಇದ್ದರು. ಶನಿವಾರ ನಡೆದ ದಾಳಿಯಲ್ಲಿ 75ಸಾವಿರ ಮೌಲ್ಯದ ಎರಡು ಆಯಿಲ್ ಎಂಜಿನ್ ಹಾಗೂ 5000ರೂ ಬೆಲೆಯ ನೀರಿನ ಪೈಪ್ ಮತ್ತು ಸ್ಥಳದಲ್ಲೆ ರಾಶಿ ಹಾಕಲಾದ ಹತ್ತು ಲೋಡ್ ಮರಳು ವಶಪಡಿಸಿಕೊಂಡಿದ್ದಾರೆ.

ಎಲ್ಲರ ಕಣ್ಣು ಮುಂದೆಯೇ ನಡೆಯುತ್ತಿರುವ ಈ ದಂದೆಯಿಂದಾಗಿ ತಾಲ್ಲೂಕಿನಾದ್ಯಂತ ಅಂತರ್ಜಲ ಬರಿದಾಗುವ  ಭೀತಿ ಇತ್ತು. ಮಳೆಗಾಲದಲ್ಲೆ ಕುಡಿಯುವ ನೀರಿಗೆ ಕಷ್ಟವಾಗಿತ್ತು. ಅನೇಕ ಕಡೆ ಕೊಳವೆ ಬಾವಿ ಬತ್ತುತ್ತಿತ್ತು. ಮಾಹಿತಿ ಇದ್ದರೂ ಅಧಿಕಾರಿಗಳು ದಾಳಿ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಬಗ್ಗೆ `ಪ್ರಜಾವಾಣಿ~ದಿನ ಪತ್ರಿಕೆಯಲ್ಲಿ ಶುಕ್ರವಾರ ವಿಸ್ತೃತ ವರದಿ ಪ್ರಕಟವಾಗಿತ್ತು.

ವರದಿಗೆ ಸ್ಪಂದಿಸಿದ ತಾಲ್ಲೂಕು ಆಡಳಿತ ಹಾಗೂ ತಹಶೀಲ್ದಾರ್ ಎಲ್.ಸಿ.ನಾಗರಾಜ್, `ಅಕ್ರಮ ಮರುಳುಗಾರಿಕೆ ನಡೆಸಲಾಗುತ್ತಿದ್ದ ಸ್ಥಳಗಳಿಗೆ ದಾಳಿ ನಡೆಸಲು ಅಧಿಕಾರಿಗಳಿಗೆ ಆದೇಶ ನೀಡಿದರು. ಮರಳುಗಾರಿಕೆ ನಡೆಸಲು ಬಳಸುವ ಯಂತ್ರೋಪಕರಣಗಳನ್ನು ವಶ ಪಡಿಸಿಕೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ ಪ್ರಕರಣ ದಾಖಲು ಮಾಡಿಕೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದರು~ ಎಂದು ಉಪ ತಹಶೀಲ್ದಾರ್ ರಾಮಲಿಂಗಪ್ಪ ಹೇಳಿದ್ದಾರೆ.

ಸುದ್ದಿಪ್ರಕಟಣೆಮಾಡಿ ದಾಳಿ ನಡೆಯಲು ಕಾರಣವಾದ ಪ್ರಜಾವಾಣಿ ದಿನಪತ್ರಿಕೆಗೆ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.