ADVERTISEMENT

ಅಕ್ರಮ ಮರಳು ಫಿಲ್ಟರ್‌ಅಡ್ಡೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 11:25 IST
Last Updated 20 ಜೂನ್ 2013, 11:25 IST

ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿದ್ದ ಫಿಲ್ಟರ್ ಮರಳು ಅಡ್ಡೆಗಳ ಮೇಲೆ ತಹಶೀಲ್ದಾರ್ ಎಚ್.ಎನ್.ಶಿವೇಗೌಡ ನೇತೃತ್ವದ ತಂಡ ದಾಳಿ ನಡೆಸಿದೆ.

ಹಂದೇನಹಳ್ಳಿ, ಮುತ್ತಾನಲ್ಲೂರು ಅಮಾನಿ ಕೆರೆ, ಮಟ್ನಹಳ್ಳಿ, ಮುಗಳೂರು, ದೇಶಪಾಂಡೆ ಗುಟ್ಟಹಳ್ಳಿ ಗ್ರಾಮಗಳಲ್ಲಿ ನಡೆಯುತ್ತಿದ್ದ ಫಿಲ್ಟರ್ ಮರಳು ಅಡ್ಡೆಗಳ ಮೇಲೆ ಬುಧವಾರ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಫಿಲ್ಟರ್ ಮರಳು ತಯಾರಿಕೆಗೆ ಬಳಸುತ್ತಿದ್ದ ತೊಟ್ಟಿಗಳನ್ನು ಜೆಸಿಬಿ ಯಂತ್ರಗಳ ಮೂಲಕ ನಾಶಗೊಳಿಸಿದ್ದಾರೆ. ಮರಳು ತಯಾರಿಕೆಗೆ ಬಳಸುತ್ತಿದ್ದ ಮೋಟರ್‌ಗಳನ್ನು ಒಡೆದುಹಾಕಿದ್ದಾರೆ. 

ದಾಳಿಯ ಸುಳಿವು ತಿಳಿಯುತ್ತಿದ್ದಂತೆ ಫಿಲ್ಟರ್ ಮರಳು ದಂಧೆ ನಡೆಸುತ್ತಿದ್ದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದರು. ತಾಲ್ಲೂಕಿನಾದ್ಯಂತ ಫಿಲ್ಟರ್ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಲಾಗುವುದು. ಇದೇ ರೀತಿ ಮರಳು ಫಿಲ್ಟರ್ ಮುಂದುವರೆಸಿದರೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಫಿಲ್ಟರ್ ಮರಳು ದಂಧೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಪ್ರಕರಣ ವರದಿಯಾದಲ್ಲಿ ಸಂಬಂಧಿಸಿದವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು. ಾಜಸ್ವ ನಿರೀಕ್ಷಕರಾದ ನಾಗೇಶ್, ಯೋಗಾನಂದ್, ಸರ್ಜಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಕಾಶ್ ದಾಳಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.