ADVERTISEMENT

ಉದ್ಯಮ ಕಲೆಯಾಗಿ ಬೆಳೆದ ಫೋಟೋಗ್ರಫಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 8:37 IST
Last Updated 27 ಡಿಸೆಂಬರ್ 2017, 8:37 IST

ದೊಡ್ಡಬಳ್ಳಾಪುರ: ಫೋಟೋಗ್ರಫಿ ಉದ್ಯಮವು ಕಲೆಯಾಗಿ ಬೆಳೆದಿದೆ. ಇದರಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು ವಾಣಿಜ್ಯೋದ್ಯಮಿ ಟಿ.ಎಸ್‌.ಮಹದೇವಯ್ಯ ಹೇಳಿದರು. ನಗರದಲ್ಲಿ ಮಂಗಳವಾರ ತಾಲ್ಲೂಕು ಫೋಟೊ ಮತ್ತು ವಿಡಿಯೊ ಛಾಯಾಗ್ರಾಹಕರ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಫೋಟೋಗ್ರಫಿಯಲ್ಲಿ ಸಾಕಷ್ಟು ತಾಂತ್ರಿಕತೆ ಬೆಳೆದಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಛಾಯಾಚಿತ್ರಗ್ರಾಹಕರು ಮುಂದಾಗಬೇಕು. ನಗರದಲ್ಲಿ ರಾಜ್ಯಮಟ್ಟದ ಹಲವಾರು ಛಾಯಾಚಿತ್ರಗ್ರಾಹಕರು ಇದ್ದಾರೆ. ಈಗಿನ ಯುವಕರು ಅಂತರ ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂದು ಹೇಳಿದರು.

ಸಾನಿಧ್ಯವಹಿಸಿದ್ದ ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದ ಮಹಾಸ್ವಾಮಿ ಮಾತನಾಡಿ, ಒಂದು ಪುಟದಲ್ಲಿ ಬರೆದು ತಿಳಿಸುವುದನ್ನು, ಒಂದು ಛಾಯಾಚಿತ್ರದ ಮೂಲಕ ತಿಳಿಸುವ ಶಕ್ತಿ ಇದೆ. ಇದನ್ನು ಸೃಜನಶೀಲವಾಗಿ ಬೆಳೆಸಿಕೊಳ್ಳುವುದನ್ನು ಯುವ ಸಮುದಾಯ ರೂಢಿಸಿಕೊಳ್ಳಬೇಕು ಎಂದರು.

ADVERTISEMENT

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಜೀವದ ಹಂಗು ತೊರೆದು ಹಲವಾರು ಸಂದರ್ಭಗಳಲ್ಲಿ ಛಾಯಾಚಿತ್ರಗ್ರಾಹಕರು ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ತೆಗೆಯುತ್ತಾರೆ. ಇವತ್ತು ಫೋಟೋಗ್ರಫಿಯಲ್ಲೂ  ಸ್ಪರ್ಧೆ ಹೆಚ್ಚಾಗಿದೆ ಎಂದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬೀಡಿಕೆರೆ ರವಿಕುಮಾರ್‌ ವಹಿಸಿದ್ದರು.

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಕೃಷ್ಣಪ್ಪ, ಬಮೂಲ್‌ ಅಧ್ಯಕ್ಷ ಎಚ್‌.ಅಪ್ಪಯ್ಯಣ್ಣ, ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌, ನಗರಸಭೆ ಸದಸ್ಯ ವಿ.ಎಸ್‌.ರವಿಕುಮಾರ್‌, ಜೆಡಿಎಸ್‌ ಜಿಲ್ಲಾ ವೀಕ್ಷಕ ಡಾ.ಎಚ್‌.ಜಿ.ವಿಜಯ್‌ಕುಮಾರ್‌, ಚಿತ್ರ ನಟಿ ಅಪೇಕ್ಷಾ ಪುರೋಹಿತ್‌, ಡಾ.ಹುಲಿಕಲ್‌ ನಟರಾಜ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ, ಛಾಯಾ ಚಿತ್ರಗ್ರಾಹಕರ ಸಂಘದ ರಾಜ್ಯ ಅಧ್ಯಕ್ಷ ಬಿ.ಎಸ್‌.ಶಶಿಧರ್‌, ಉಪಾಧ್ಯಕ್ಷ ಎಚ್‌.ಎಸ್‌. ನಾಗೇಶ್‌, ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕ ಬಿ.ಸಿ.ಆನಂದ್‌ ಹಾಜರಿದ್ದರು. ಟಿ.ಎಸ್‌.ಗೌತಮ್‌ ಅವರ ಸ್ಮರಣಾರ್ಥ 3ನೇ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಮತ್ತು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.