ದೇವನಹಳ್ಳಿ: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಆರ್ಮಿ ಕ್ರಿಕೆಟ್ ಕ್ಲಬ್ ಏರ್ಪಡಿಸಿದ್ದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಶಾಸಕ ಕೆ.ವೆಂಕಟಸ್ವಾಮಿ ಬೌಂಡರಿ ಬಾರಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ದೇಶದ ಶೇ60ರಷ್ಟು ಯುವಕರಿಗೆ ಕ್ರಿಕೆಟಿನತ್ತ ಒಲವು ಇದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಬೆಳವಣಿಗೆ ಕಾಣುತ್ತಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ಒಂದು ತಂಡದ ಗೆಲುವಿಗೆ ತಂಡದ ತೀರ್ಮಾನ ಬಹಳ ಮುಖ್ಯ. ಆಸಕ್ತಿ, ಛಲ ಏಕಾಗ್ರತೆ ಗೆಲುವಿನ ಮಂತ್ರವಾದಾಗ ಉತ್ತಮ ತಂಡವಾಗಿ ಹೊರಬರಲು ಸಾಧ್ಯ. ಆ ನಿಟ್ಟಿನಲ್ಲಿ ಕ್ರೀಡಾ ತಂಡಗಳು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕಿನಲ್ಲಿ ಕ್ರೀಡಾ ಆಸಕ್ತರು ಮತ್ತು ಪ್ರೋತ್ಸಾಹಕರು ಇದ್ದಾರೆ. ಅನೇಕ ಹಿರಿಯ ಕ್ರೀಡಾಪಟುಗಳು, ಕಿರಿಯ ಕ್ರೀಡಾಪಟುಗಳಿಗೆ ಒಂದೇ ಕ್ರೀಡೆಗೆ ಸೀಮಿತಗೊಳಿಸದೆ ಗ್ರಾಮೀಣ ಕ್ರೀಡೆಗಳ ಬಗ್ಗೆ ಆಸಕ್ತಿವಹಿಸುವಂತೆ ಮನವರಿಕೆ ಮಾಡುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಆರ್.ರವಿಕುಮಾರ್ ತಿಳಿಸಿದರು.
ವಿ.ಎಸ್.ಎಸ್.ಎನ್ ಬ್ಯಾಂಕ್ ಅಧ್ಯಕ್ಷ ಎನ್.ರಘು, ಪುರಸಭೆ ಸದಸ್ಯ ಮುನಿರಾಜು, ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಚಂದ್ರಪ್ಪ, ರೋಡಹಳ್ಳಿ ರಾಜಣ್ಣ, ವಿಜಯಕುಮಾರ್ ಶಶಿಕುಮಾರ್ ದೈಹಿಕ ಶಿಕ್ಷಣ ಶಿಕ್ಷಕ ಬಿ.ಪುಟ್ಟಸ್ವಾಮಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.