ದೊಡ್ಡಬಳ್ಳಾಪುರ: ಬಿಜೆಪಿ ಮುಖಂಡ ಹಾಗೂ ಎಪಿಎಂಸಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್ ಹೇಳಿಕೆಗೆ ಸ್ಥಳೀಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿ.ಖಂಜಾಚಿ ಬಿ.ಮುನೇಗೌಡ ವಿರೋಧ ಪಕ್ಷಗಳ ಮುಖಂಡರು ಜನರನ್ನು ದಾರಿತಪ್ಪಿಸಲು ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ.
ಜಾತಿ ರಾಜಕಾರಣ ಮಾಡುತ್ತಿಲ್ಲ ಎನ್ನುವ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸ್ಥಾನದಿಂದ ಸದಾನಂದಗೌಡರನ್ನು ಕೆಳಗಿಳಿಸಲು ಜಗದೀಶ ಶೆಟ್ಟರ ಪರವಾಗಿ ಕೈ ಎತ್ತಿ ಸದಾನಂದ ಗೌಡರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡುವಂತೆ ಆಗ್ರಹಿಸಿ ತಾಲ್ಲೂಕು ಬಂದ್ಗೆ ಕರೆ ನೀಡುವ ಅಗತ್ಯ ಇರಲಿಲ್ಲ ಎಂದು ಹೇಳಿದ್ದಾರೆ.
ನರಸಿಂಹಸ್ವಾಮಿ ಅವರು 15 ವರ್ಷಗಳಿಂದ ಎಲ್ಲ ಪಕ್ಷಗಳಿಂದಲೂ ಸ್ಪರ್ಧಿಸಿ ಶಾಸಕರಾಗಿದ್ದರೂ ನೆರೆಯ ಮೀಸಲು ಕ್ಷೇತ್ರವಾಗಿರುವ ದೇವನಹಳ್ಳಿ ಕ್ಷೇತ್ರಕ್ಕೆ ಹೋಲಿಕೆ ಮಾಡಿದರೆ ದೊಡ್ಡಬಳ್ಳಾಪುರ ಅತ್ಯಂತ ಹಿಂದುಳಿದಿದೆ ಎಂದಿದ್ದಾರೆ.
`ಆತ್ಮ ಸಾಕ್ಷಿ ಇಲ್ಲದವರು~
ಭೂ ಮಂಜೂರಾತಿ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಎಂ.ಮುನಿರಾಮೇ ಗೌಡ ಅವರಿಗೆ ಆತ್ಮಸಾಕ್ಷಿ ಇದ್ದರೆ ನನ್ನ ವಿರುದ್ಧ ಮಾಡಿರುವ ಪಕ್ಷದ್ರೋಹದ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್ ಆಗ್ರಹಿಸಿದ್ದಾರೆ.
ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದೇನೆಯೇ ಹೊರತು ಕೆ.ಎಂ.ಮುನಿರಾಮೇಗೌಡ ಅವರಂತೆ ವ್ಯಕ್ತಿಗಳ ಪರವಾಗಿ ಕೆಲಸ ಮಾಡಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿನ ಅಭಿವೃದ್ಧಿ ಕೆಲಸಗಳು ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು ಎನ್ನುವ ದೃಷ್ಟಿಯಿಂದ ರಸ್ತೆ ವಿಸ್ತರಣೆ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದೆನೇ ಹೊರತು ಅಭಿವೃದ್ಧಿ ಕೆಲಸ ನಿಲ್ಲಸಬೇಕು ಎಂದು ಅಲ್ಲ. ಜಾತಿ ಕಾರಣಕ್ಕಾಗಿ ತಾಲ್ಲೂಕಿನಲ್ಲಿ ಎಂದೂ ಯಾವ ಜಾತಿಯವರು ಬಂದ್ಗೆ ಕರೆ ನೀಡಿದ ಉದಾಹರಣೆ ಇರಲಿಲ್ಲ.
ಆದರೆ ಶಾಸಕ ಜೆ.ನರಸಿಂಹಸ್ವಾಮಿ ಅವರು ತಮ್ಮ ಹಿಂಬಾಲಕರ ಮೂಲಕ ಬಂದ್ಗೆ ಕರೆ ನೀಡಿ ತಾಲ್ಲೂಕಿನಲ್ಲಿ ಜಾತಿ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಅವರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.