ವಿಜಯಪುರ: ಪಟ್ಟಣಕ್ಕೆ ಬುಧವಾರ ಆಗಮಿಸಿದ ಸಿದ್ಧಗಂಗಾ ಮಠಾಧ್ಯಕ್ಷರಾದ ಶಿವಕುಮಾರ ಸ್ವಾಮಿ ಅವರ ಸಾಧನಾ ರಥದ ಯಾತ್ರೆಗೆ ವಿಜೃಂಭಣೆಯ ಸ್ವಾಗತ ಕೋರಲಾಯಿತು.
ಪಟ್ಟಣದ ದೇವನಹಳ್ಳಿ ರಸ್ತೆಯಲ್ಲಿರುವ ಮಾರುತಿ ಆಂಜನೇಯಸ್ವಾಮಿ ದೇವಾಲಯದ ಬಳಿ 110 ಮುತ್ತೈದಿಯರಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು.
ಡೊಳ್ಳುಕುಣಿತ, ದ್ವಜಕುಣಿತ, ಗೊರವಕುಣಿತ, ವೀರಗಾಸೆ ಕುಣಿತ, ತಮಟೆವಾದನಗಳು, ಹೆಣ್ಣು ಮಕ್ಕಳಿಂದ ಜಾನಪದ ನೃತ್ಯಗಳೊಂದಿಗೆ ವಿವಿಧ ಜಾನಪದ ಕಲಾತಂಡಗಳು, ಮಂಗಳ ವಾದ್ಯಗಳೊಂದಿಗೆ ಆಂಜನೇಯ ಸ್ವಾಮಿ ದೇವಾಲಯದ ಬಳಿಯಿಂದ 2 ನೇ ವಾರ್ಡಿನ ಜಯಚಾಮರಾಜೇಂದ್ರ ಒಡೆಯರ್ ಉದ್ಯಾನವನದ ರಸ್ತೆಯ ಮೂಲಕ ಶಿವಗಣೇಶ ವೃತ್ತದ ಮುಖಾಂತರ ಗಾಂಧಿ ಚೌಕಕ್ಕೆ ತೆರಳಿ ವಿವಿಧ ಸಮುದಾಯಗಳ ಮುಖಂಡರಿಂದ ಪೂಜೆ ಸ್ವೀಕಾರ ಮಾಡಿದ ನಂತರ ಮುಖ್ಯಬೀದಿಯಲ್ಲಿ ಮೆರವಣಿಗೆಯ ಮೂಲಕ ಓಂಕಾರೇಶ್ವರಸ್ವಾಮಿ ದೇವಾಲಯದ ಬಳಿ ಪೂಜೆ ಸ್ವೀಕಾರ ಮಾಡಿ ಸೂಲಿಬೆಲೆ ಕಡೆಗೆ ಹೊರಟಿತು.
ರಥವು ಸಾಗುವ ರಸ್ತೆಗಳಲ್ಲಿ ಎಲ್ಲ ಸಮುದಾಯಗಳ ಜನರು ರಂಗೋಲಿ ಹಾಕಿ, ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಭಾಗವಹಿಸಿದ್ದ ವಿವಿಧ ಕಲಾತಂಡಗಳು ಹಾಗೂ ನೃತ್ಯಗಾರರಿಗೆ ಬಸ್ ನಿಲ್ದಾಣದ ಸಮೀಪದ ತಿರುಮಲ ಸಿಹಿ ಅಂಗಡಿ ವತಿಯಿಂದ ಪಾನಕ, ಕೋಸಂಬರಿ, ಮಜ್ಜಿಗೆ ವಿತರಣೆ ಮಾಡಲಾಯಿತು.
ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್, ಎಸ್.ಭಾಸ್ಕರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹುಲಿಕಲ್ ನಟರಾಜ್, ಪತಂಜಲಿ ಯೋಗಶಿಕ್ಷಣ ಸಮಿತಿಯ ಸಂಚಾಲಕಿ ಭಾರತಿ ಪ್ರಭುದೇವ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾ.ಸುರೇಶ್ಬಾಬು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ವಿ. ಬಸವರಾಜ್, ನಾರಾಯಣಸ್ವಾಮಿ ಮುಂತಾದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
*
ಶಿವಕುಮಾರ ಸ್ವಾಮಿ ಅವರ ಸಾಧನೆಗೆ ಕೇಂದ್ರ ಸರ್ಕಾರ ‘ಭಾರತರತ್ನ’ ಪ್ರಶಸ್ತಿ ನೀಡಿ ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು.
-ಎಚ್.ಎಸ್. ರುದ್ರೇಶಮೂರ್ತಿ,
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.