ದೊಡ್ಡಬಳ್ಳಾಪುರ: ‘ಚುನಾವಣೆಯಲ್ಲಿ ನೇರವಾಗಿ ಎದುರಿಸಲು ಸಾಧ್ಯವಾಗದವರು ಮಾಧ್ಯಮಗಳ ಮೂಲಕ ತೇಜೋವಧೆಗೆ ಇಳಿದಿದ್ದಾರೆ. ಇದಕ್ಕೆ ಅಂಜುವುದಿಲ್ಲ’ ಎಂದು ಬಿಜೆಪಿ ಹಿರಿಯ ಮುಖಂಡ ಜೆ.ನರಸಿಂಹಸ್ವಾಮಿ ಹೇಳಿದರು.
ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾನು ಬಿಜೆಪಿ ಅಭ್ಯರ್ಥಿಯಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಈಗಾಗಲೇ ಎಲ್ಲ ಸಿದ್ಧತೆಗಳು ನಡೆದಿವೆ. ಪಕ್ಷ ಸಂಘಟನೆ ಕುರಿತಂತೆ ಕೆಲಸ ಮಾಡಲಾಗುತ್ತಿದೆ. ಆದರೆ ಇದನ್ನು ಸಹಿಸದ ತಾಲ್ಲೂಕಿನ ಇತರೆ ಪಕ್ಷಗಳವರು ಜೆಡಿಎಸ್ ಸೇರುತ್ತಾರೆ, ಕಾಂಗ್ರೆಸ್ ಸೇರುತ್ತಾರೆ ಎಂದು ದಿನಕ್ಕೆ ಒಂದೊಂದು ರೀತಿಯ ಸುಳ್ಳು ಸುದ್ಧಿಗಳನ್ನು ಹಬ್ಬಿಸುತ್ತಿದ್ದಾರೆ’ ಎಂದು ದೂರಿದರು.
‘ನನ್ನ ತಂದೆ ಆರ್.ಎಲ್.ಜಾಲಪ್ಪ ಅವರ ಆರೋಗ್ಯ ಸರಿ ಇಲ್ಲದ ಕಾರಣದಿಂದಾಗಿ ಒಂದು ತಿಂಗಳಿಂದ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡಿರುವ ರಾಜಕೀಯ ವಿರೋಧಿಗಳು ಮಾಧ್ಯಮಗಳ ಮೂಲಕ ಅಪಪ್ರಚಾರಕ್ಕೆ ಇಳಿದಿದ್ದಾರೆ’ ಎಂದರು.
‘ಕ್ಷೇತ್ರದ ಮತದಾರರು ಯಾರು ಉತ್ತಮರು ಎನ್ನುವುದನ್ನು ತಿಳಿದು ಆಯ್ಕೆ ಮಾಡುತ್ತಾರೆ ವಿನಾ ಅಪಪ್ರಚಾರಗಳಿಗೆ ಬೆಲೆ ಕೊಡುವುದಿಲ್ಲ. ನನ್ನ ತಂದೆಯ ಆರೋಗ್ಯ ಸುಧಾರಿಸಿದ ನಂತರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ’ ಎಂದು ಅವರು ಹೇಳಿದರು. ಪಕ್ಷದ ತಾಲ್ಲೂಕು ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎನ್.ಹನುಮಂತೇಗೌಡ ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.
* *
ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷದ ಸೇರ್ಪಡೆಗೂ ಅರ್ಜಿ ಸಲ್ಲಿಸಿಲ್ಲ. ಪಕ್ಷದಲ್ಲಿ ಸಕ್ರಿಯನಾಗಿದ್ದೇನೆ. ನಾನು ಯಾವುದೆ ಪಕ್ಷದ ಬಾಗಿಲು ತಟ್ಟುವ ಅಗತ್ಯ ನನಗಿಲ್ಲ
ಜೆ. ನರಸಿಂಹಸ್ವಾಮಿ,
ಬಿಜೆಪಿ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.