ADVERTISEMENT

ದೇವನಹಳ್ಳಿ–ಆಧುನಿಕ ಮಾದರಿ ಬಸ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 10:36 IST
Last Updated 12 ಜುಲೈ 2017, 10:36 IST
ದೇವನಹಳ್ಳಿ ಪುರಸಭೆ ಅಧ್ಯಕ್ಷರ ನಿಯೋಗದಿಂದ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್‌ಗೆ ಸೋಮವಾರ ಮನವಿ ನೀಡಲಾಯಿತು
ದೇವನಹಳ್ಳಿ ಪುರಸಭೆ ಅಧ್ಯಕ್ಷರ ನಿಯೋಗದಿಂದ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್‌ಗೆ ಸೋಮವಾರ ಮನವಿ ನೀಡಲಾಯಿತು   

ದೇವನಹಳ್ಳಿ: ‘ತಾಲ್ಲೂಕು ಕೇಂದ್ರದಿಂದ ಬೆಂಗಳೂರು ನಗರದ ವಿವಿಧೆಡೆಗೆ ವೋಲ್ವೊ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ನಾಗರಾಜ್ ಯಾದವ್ ಭರವಸೆ ನೀಡಿದರು. ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಗೋಪಾಲ್ ಅವರು ಬಿಎಂಟಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಯಾದವ್ ಮಾತನಾಡಿ,‘ಬಿಎಂಟಿಸಿ ನಿಮ್ಮ ಮನೆ ಬಾಗಿಲ ಯೋಜನೆಯಡಿ ಗ್ರಾಮಾಂತರ ಪ್ರದೇಶದಲ್ಲಿ ಇನ್ನಷ್ಟು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೆ 1,200 ಹೆಚ್ಚಿನ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 48 ಜನದಟ್ಟಣೆ ಇರುವ ಬಿಎಂಟಿಸಿ ನಿಲ್ದಾಣದಲ್ಲಿ ಡಿಜಿಟಲ್ ವಾಚನಾಲಯ, ಪುರುಷ ಮತ್ತು ಮಹಿಳೆಯರಿಗೆ ಹೈಟೆಕ್ ಶೌಚಾಲಯ ನಿರ್ಮಿಸಲಾಗುವುದು. ನೂತನ ಬಸ್ ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಚಾಲಕ ಮತ್ತು ನಿರ್ವಾಹಕರ ಆರೋಗ್ಯ ಸೇವೆಗಾಗಿ ₹ 50 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದರು.

ADVERTISEMENT

ಹೊಗೆರಹಿತ 150 ಬಸ್ ಸಂಚಾರ ಈಗ ವ್ಯವಸ್ಥೆಯಲ್ಲಿವೆ. ಪರಿಸರ ರಕ್ಷಣೆ ನೀಡುವ ನಿಟ್ಟಿನಲ್ಲಿ ಹತ್ತು ವರ್ಷ ಸಂಚಾರ ಮಾಡಿದ ಬಸ್‌ಗಳನ್ನು ದುರಸ್ತಿಗೊಳಿಸಿ ಆಧುನೀಕರಿಸಲಾಗುತ್ತಿದೆ ಎಂದರು.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ನಂತರ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಸಂಚಾರವಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.

ಪಟ್ಟಣದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುವರೆಗೆ ಬಿಎಂಟಿಸಿ ಬಸ್ ಸಂಚರಿಸುತ್ತಿಲ್ಲ, ಬೆಳಿಗ್ಗೆ 7ರಿಂದ 11ಮತ್ತು ಸಂಜೆ 3ರಿಂದ ರಾತ್ರಿ 8ರ ವರೆಗೆ ಹೆಚ್ಚುವರಿ ಬಸ್ ಸಂಚಾರ ಅಗತ್ಯವಿದೆ ಎಂದು ತಿಳಿಸಲಾಗಿದೆ. ತಾಲ್ಲೂಕು ಜೆಡಿಎಸ್ ಯುವ ಘಟಕ ಅಧ್ಯಕ್ಷ ದೊಡ್ಡಸಣ್ಣೆ ಮುನಿರಾಜು, ಪುರಸಭೆ ಸದಸ್ಯ ಶಶಿಕುಮಾರ್, ನಿಯೋಗದಲ್ಲಿ ಇದ್ದರು.

* * 

ಬೊಮ್ಮವಾರ, ಕೊಯಿರಾ, ಕಾರಹಳ್ಳಿ, ಯಲಿಯೂರು, ನಲ್ಲೂರು ಗ್ರಾಮಗಳ ಮಾರ್ಗದಲ್ಲಿ ಹೆಚ್ಚುವರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರಿ ಕಾಲೇಜುವರೆಗೆ ಬಸ್ ಸಂಚಾರ ಬೇಕು
ನರಸಿಂಹಮೂರ್ತಿ, ಪುರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.