ADVERTISEMENT

ದೇವನಹಳ್ಳಿ: ವಿಶ್ವ ಅಂತರಿಕ್ಷ ಉಪಗ್ರಹ ಸಪ್ತಾಹಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ದೇವನಹಳ್ಳಿ: `ಶೈಕ್ಷಣಿಕ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಿರುವುದು ಸಂತಸದ ಸಂಗತಿ. ಇನ್ನಷ್ಟು ಶ್ರದ್ಧೆ, ಏಕಾಗ್ರತೆ ಮತ್ತು ಶ್ರಮ ವಹಿಸಿ ಬಾಹ್ಯಾಕಾಶ ಇಲಾಖೆಗೆ ಸೇರ್ಪಡೆಯಾಗಬೇಕು~ ಎಂದು ಇಸ್ರೋ ಎಲ್.ಪಿ.ಎಸ್.ಸಿ ಘಟಕ ಸಹಾಯಕ ನಿರ್ದೇಶಕ ಬಿ.ಕೆ.ವೆಂಕಟರಾಮ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಭವನದಲ್ಲಿ ಸೋಮವಾರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೇಂದ್ರ ಅಂತರೀಕ್ಷ ಹಾಗೂ ಬಾಹ್ಯಾಕಾಶ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಅಂತರಿಕ್ಷ ಉಪಗ್ರಹ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ವಿದ್ಯಾರ್ಥಿಗಳೊಂದಿಗೆ ವಿಜ್ಞಾನಿಗಳು ಸೇರುವುದು ತೀರ ಅಪರೂಪ. ಇಂಥ ಕಾರ್ಯಕ್ರಮಗಳನ್ನು ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು. ಅನೇಕರು ವಿಜ್ಞಾನಿಗಳನ್ನು ನಿಗೂಢರು ಎಂದೇ ಭಾವಿದ್ದಾರೆ. ಆದರೆ ಅವರು ಸಹ ಆಗಾಗ್ಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡಬೇಕು. ಇದು ಕೆಲವು ಮಕ್ಕಳನ್ನು ಪ್ರಭಾವಿಸಬಹುದು~ ಎಂದರು. `ಈ ಹಿಂದೆ ಶಿಕ್ಷಣ ಪದ್ದತಿ ಕಠಿಣವಾಗಿತ್ತು. ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಎಲ್ಲಾ ರೀತಿಯ ಶೈಕ್ಷಣಿಕ ಸವಲತ್ತು ಸಿಗುತ್ತಿದ್ದರು ಸಹ ಅವು ಕೇವಲ ಪಟ್ಟಣಗಳಿಗೆ ಮೀಸಾಲಾಗಿದೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಮಟ್ಟ ಸಾಕಷ್ಟು ಸುಧಾರಣೆಯಾಗಬೇಕಾಗಿದೆ~ ಎಂದರು.

ಸಪ್ತಾಹದ ಉದ್ದೇಶ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಅಂತರಿಕ್ಷಯಾನದ ಬೆಳವಣಿಗೆ ಕುರಿತು ಆಸಕ್ತಿ ಮೂಡಿಸುವುದಾಗಿದೆ ಅತ್ಯಂತ ಸಾಮಾನ್ಯ ವಿದ್ಯಾರ್ಥಿಗಳು ಅವಕಾಶ ಪಡೆಯಬಹುದು. ಬಾಹ್ಯಾಕಾಶ ಇಲಾಖೆ ಏನೇ ಮಾಡಿದರೂ ಮಾನವನ ಒಳಿತಿಗಾದರೂ ಇತಿಹಾಸ ಸೃಷ್ಠಿಸುವ ಸಂಶೋಧನಾ ಕೇಂದ್ರ ಶಿತಲ ಸಮರದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ~ ಎಂದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ವಿ.ವೆಂಕಟೇಶಯ್ಯ, ವಿಷಯ ಆಧಾರಿತ ಪಠ್ಯಗಳ ಜೊತೆಗೆ ವಿಜ್ಞಾನದ ಕೆಲವು ಅಂಶಗಳನ್ನು ತಿಳಿಯಲು ಇಂತಹ ಕಾರ್ಯಕ್ರಮಗಳು ಅನುಕೂಲ ಕಲ್ಪಿಸುತ್ತವೆ. ವಿದ್ಯಾರ್ಥಿಗಳಲ್ಲಿ ನಿಜವಾದ ಸಾಮರ್ಥ್ಯ ಹೊರಬರಲು ಖಂಡಿತ ನೆರವಾಗಲಿದೆ~ ಎಂದರು.

`ಇಸ್ರೋ,  ಗ್ರಾಮೀಣ ಭಾಗಕ್ಕೆ ಬಂದಿರುವುದು ಸಂತಸದ ಸಂಗತಿ. ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳಬೇಕು~ ಎಂದು ತಿಳಿಸಿದರು.

ಇಸ್ರೋ ಇಲಾಖೆ ತಾಂತ್ರಿಕಾಧಿಕಾರಿ ಗುರುಪ್ರಸಾದ್, `1957 ರಲ್ಲಿ ಸೋವಿಯತ್ ರಷ್ಯ ಕೃತಕ ಸ್ಪುಟ್ನಿಕ್ 1 ಉಪಗ್ರಹ ಉಡಾವಣೆಯ ನಂತರ ವಿಶ್ವ ಅಂತರಿಕ್ಷ ಮಟ್ಟದ ಬೆಳವಣಿಗೆಯಲ್ಲಿ ಸಾಕಷ್ಟು ಸುಧಾರಣೆಗಳಾದವು. ನಂತರ ಎಚ್ಚೆತ್ತುಕೊಂಡ ಭಾರತದ ಇಸ್ರೋ ವಿಜ್ಞಾನಿ ವಿಕ್ರಂ ಸಾರಾಬಾಯಿ ಅದ್ಭುತ ಸಂಶೋಧನೆಗೆ ಮುಂದಾಗಿ ಹಂತ ಹಂತವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂದುವರೆದು ಚಂದ್ರನ ಮೇಲೆ ಉಪಗ್ರಹ ಇಳಿಸಿದ ವಿಶ್ವದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲು ಕಾರಣಕರ್ತರಾದರು.

ವಿದ್ಯಾರ್ಥಿಗಳು ಇದನ್ನರಿತು ಉತ್ತಮ ಯುವ ವಿಜ್ಞಾನಿಗಳಾಗಿ ರೂಪುಗೊಳ್ಳಬೇಕು~ ಎಂದು ಸಲಹೆ ನೀಡಿದರು.
ಡಬ್ಲ್ಯೂ.ಎಸ್, ಡಬ್ಲ್ಯೂ ಯೋಜನಾ ಸಮಿತಿ ಛೇರ‌್ಮೆನ್ ಹೆಚ್.ಎಸ್.ಅನಂತರಾಮ ರೆಡ್ಡಿ ಇಸ್ರೋ ಎಲ್.ಪಿ.ಎಸ್.ಸಿ.ವಿ ವಿಭಾಗ ವ್ಯವಸ್ಥಾಪಕ ಎಸ್.ರವಿಶಂಕರ್ ಡಬ್ಲ್ಯೂ.ಎಸ್, ಡಬ್ಲ್ಯೂ ಸಮಿತಿ ಛೇರ‌್ಮೆನ್ ಬಿ.ವಾಸುದೇವ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.