ಆನೇಕಲ್: ಆನೇಕಲ್–ಚಂದಾಪುರ ರಸ್ತೆಯ ಬ್ಯಾಗಡದೇನಹಳ್ಳಿಯಿಂದ ಇಗ್ಗಲೂರುವರೆಗೆ ಬಾಕಿ ಉಳಿದಿದ್ದ ರಸ್ತೆಯನ್ನು ದ್ವಿಪಥದ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು ₹5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.
ತಾಲ್ಲೂಕಿನ ಬ್ಯಾಗಡದೇನಹಳ್ಳಿಯ ಬಳಿ ಈ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಆನೇಕಲ್–ಚಂದಾಪುರ ರಸ್ತೆ ಪಟ್ಟಣದಿಂದ ಬೆಂಗಳೂರು ಸೇರಿದಂತೆ ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು ಆನೇಕಲ್ನಿಂದ ಪ್ರತಿದಿನ ಸಹಸ್ರಾರು ಮಂದಿ ಪ್ರಯಾಣಿಸುತ್ತಾರೆ. ಆನೇಕಲ್–ಬ್ಯಾಗಡದೇನಹಳ್ಳಿವರೆಗೆ ಸುಸಜ್ಜಿತ ದ್ವಿಪಥದ ರಸ್ತೆ ನಿರ್ಮಾಣವಾಗಿತ್ತು ಎಂದರು.
ಇಗ್ಗಲೂರು– ಚಂದಾಪುರವರೆಗೆ ದ್ವಿಪಥ ರಸ್ತೆಯಿದೆ. ಬ್ಯಾಗಡದೇನಹಳ್ಳಿ ಗೇಟ್ನಿಂದ ಇಗ್ಗಲೂರುವರೆಗೆ ಚಿಕ್ಕದಾದ ರಸ್ತೆಯಿತ್ತು. ಈ ಕಾಮಗಾರಿಯನ್ನು ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸ
ಲಾಗಿದೆ ಎಂದರು. ಇದರಿಂದ ಪ್ರತಿನಿತ್ಯ ಸಂಚರಿಸುವ ಸಹಸ್ರಾರು ಮಂದಿ ಪ್ರಯಾಣಿಕರಿಗೆ ಸಮಯ ಉಳಿತಾಯ ಹಾಗೂ ಸುಗಮ ಸಂಚಾರಕ್ಕೆ ಅನುವಾಗಲಿದೆ. ದ್ವಿಪಥ ರಸ್ತೆಗಳಾದ ನಂತರ ಅಪಘಾತಗಳು ಕಡಿಮೆಯಾಗಿವೆ ಎಂದರು.
ಆನೇಕಲ್ನಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ನಡೆಯುತ್ತಿದ್ದು ಅಂತಿಮ ಹಂತದಲ್ಲಿದೆ. ಶೀಘ್ರದಲ್ಲಿ ಇದನ್ನು ಉದ್ಘಾಟಿಸಲಾಗುವುದು ಎಂದರು. ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ್, ಪುರಸಭಾ ಸದಸ್ಯ ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಣ್ಣ, ಆನೇಕಲ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬನಹಳ್ಳಿ ರಾಮಚಂದ್ರರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಆನಂದ್, ಮುಖಂಡರಾದ ರಾಜಪ್ಪ, ಎಸ್.ಟಿ.ಡಿ. ರಮೇಶ್, ದೊಡ್ಡಹಾಗಡೆ ಸುಬ್ಬಣ್ಣ, ವೆಂಕಟೇಶ್, ಓಬಳ್ರೆಡ್ಡಿ, ಶಿವರಾಮರೆಡ್ಡಿ, ರಘುಪತಿ ರೆಡ್ಡಿ ಹಾಜರಿದ್ದರು.
**
ಅಭಿವೃದ್ಧಿ ಕಾರ್ಯ
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೊಡ್ಡಹಾಗಡೆ ಹರೀಶ್ ಗೌಡ ಮಾತನಾಡಿ, ಮರಸೂರು ಹಾಗೂ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಬಿ.ಶಿವಣ್ಣ ಅವರ ಕಾಳಜಿಯಿಂದ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.
ಎಲ್ಲ ರಸ್ತೆಗಳು ಸರ್ವ ಋತು ರಸ್ತೆಗಳಾಗಿವೆ. ಚುನಾವಣೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.