ADVERTISEMENT

‘ಧರ್ಮದಿಂದ ಎಲ್ಲ ಮನಸ್ಸುಗಳು ಬೆಸೆಯಲಿ’

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 5:16 IST
Last Updated 1 ಅಕ್ಟೋಬರ್ 2017, 5:16 IST

ವಿಜಯಪುರ: ಧರ್ಮ ಪ್ರಧಾನ ದೇಶವಾದ ಭಾರತದಲ್ಲಿ ಅನೇಕ ಧರ್ಮಗಳು ಇವೆ. ಎಲ್ಲರ ಮನಸ್ಸುಗಳನ್ನು ಬೆಸೆಯುವ ಕೆಲಸ ಧರ್ಮಗಳಿಂದ ನಡೆಯಬೇಕು ಎಂದು ಬಸವ ಕಲ್ಯಾಣ ಮಠದ ಅಧ್ಯಕ್ಷ ಮಹದೇವಸ್ವಾಮಿಜೀ ಹೇಳಿದರು.

ಗ್ರಂಥಾಲಯದ ಮುಂಭಾಗದಲ್ಲಿ ನವ ದುರ್ಗಾ ಸೇನೆಯ ವಿಜಯಪುರ ಇವರ ವತಿಯಿಂದ ನಡೆಸಲಾಗುತ್ತಿರುವ ಗಣಪತಿ ಮತ್ತು ದುರ್ಗಾದೇವಿಯ ಉತ್ಸವದ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜ ಪ್ರತಿಯೊಬ್ಬ ನಾಗರಿಕರು ಧಾರ್ಮಿಕ ಕಾರ್ಯಗಳಿಗೆ ನಿರಂತರ ಪ್ರೋತ್ಸಾಹ ನೀಡಿ, ಧರ್ಮ ಜಾಗೃತಿಯಲ್ಲಿ ಭಾಗಿಯಾಗಬೇಕು. ಈ ದೇಶದಲ್ಲಿ ಹಲವಾರು ಧರ್ಮಗಳು ಪಂಥಗಳಿದ್ದರೂ ಎಲ್ಲ ಧರ್ಮಗಳ ಅಂತಿಮ ಗುರಿ ಮಾನವ ಕಲ್ಯಾಣವೇ ಆಗಿದೆ’ ಎಂದರು.

ADVERTISEMENT

ಕುವೆಂಪು ಅವರು ಹೇಳಿದಂತೆ ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವಲ್ಲಿ ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಂಡಾಗ ಎಲ್ಲ ರಂಗಗಳಲ್ಲಿ ಸೌಹಾರ್ದತೆ ಶಾಂತಿ ಸಾಮರಸ್ಯ ಕಾಣಲು ಸಾಧ್ಯವಾಗುತ್ತದೆ ಎಂದರು.

ಆದಿಶಕ್ತಿ ದ್ರೌಪದಾದೇವಿ ಮಹಾಸಂಸ್ಥಾನ ಬಳುಹಳ್ಳಿಯ ಸಾಯಿ ಮಂಜುನಾಥ್ ಮಹಾರಾಜ ಸ್ವಾಮಿಜಿ ಮಾತನಾಡಿ, ಭೂಮಿಯ ಮೇಲೆ ಧರ್ಮ ಕಡಿಮೆಯಾಗಿ ಕರ್ಮ ತಾಂಡವವಾಡುತ್ತಿದೆ. ಕರ್ಮ ಕಡಿಮೆಯಾಗಿ ಧರ್ಮ ಹೆಚ್ಚಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.

ನವ ದುರ್ಗಾ ಸೇನೆಯ ಸಂಚಾಲಕ ಎಸ್.ಎಂ.ಸುರೇಶ್ (ಅಣ್ಣಮ್ಮತಾಯಿ ಸುರೇಶ್) ಮಾತನಾಡಿ, ‘ಯುವಜನರು ಧಾರ್ಮಿಕ ಕಾರ್ಯಗಳಿಂದ ದೂರ ಉಳಿಯುತ್ತಿದ್ದಾರೆ. ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಹಿರಿಯರು ಉಳಿಸಿಕೊಂಡು ಬಂದಿರುವ ಪರಂಪರೆಯನ್ನು ಉಳಿಸಿಕೊಳ್ಳಬೇಕಾದಂತಹ ಹೊಣೆಗಾರಿಕೆ ನಮ್ಮ ಮೇಲೆ ಇದೆ’ ಎಂದರು.

ದುರ್ಗಾದೇವಿ ಸಮೇತ ಗಣಪತಿ ಉತ್ಸವದ ಅಂಗವಾಗಿ ಗ್ರಂಥಾಲಯದ ಆವರಣದ ಸುತ್ತಲೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಲ್ಲಿಂದ ಪುರಸಭೆಯವರೆಗೂ ದೀಪಾಂಲಕಾರ ಎಲ್ಲರ ಗಮನ ಸೆಳೆಯಿತು. ನವದುರ್ಗಾ ಸೇನೆಯ ಪದಾಧಿಕಾರಿಗಳು, ನಾಗರಿಕರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.