ಆನೇಕಲ್: ಮಳೆಯಿಲ್ಲದೆ ಬೆಳೆ ಯಾಗುತ್ತಿಲ್ಲ ಎಂದು ಪರದಾಡುತ್ತಿದ್ದ ತಾಲ್ಲೂಕಿನ ರೈತರು ಜಡಿ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದ ಂತಾಗಿದೆ ಎಂದು ಹೂವು ರೈತರು ಗೋಳಾಡುವಂತಾಗಿದೆ. ರಾಗಿಯ ಕಣಜವೆಂದು ಹೆಸರುವಾ ಸಿಯಾಗಿದ್ದ ಆನೇಕಲ್ ತಾಲ್ಲೂಕಿನಲ್ಲಿ ರೈತರು ಕೃಷಿ ಜೊತೆಗೆ ತೋಟಗಾರಿಕೆ ಬೆಳೆಗಳ ಕಡೆಗೆ ಆಸಕ್ತಿ ತೋರಿಸಿದ್ದರು. ಈಚೆಗೆ ಪುಷ್ಪೋದ್ಯಮದಲ್ಲಿ ಸಹ ಉತ್ತಮ ಫಸಲು ಪಡೆದು ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದ್ದರು.
ಅದರಂತೆ ಆನೇಕಲ್ ತಾಲ್ಲೂಕಿನ ಸಬ್ಮಂಗಲ, ಗುಡ್ಡನಹಳ್ಳಿ, ಕರ್ಪೂರು, ಭಕ್ತಿಪುರ ಹಾಗೂ ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಕೊಮಾರನಹಳ್ಳಿ, ಸೆಕೆಂಡ್ ಮದ್ರಾಸ್, ಪೂನಹಳ್ಳಿ ಭಾಗ ಗಳಲ್ಲಿ ಸೇವಂತಿಗೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆಯುತ್ತಾರೆ.
ಈ ಭಾಗದಲ್ಲಿ ಬೆಳೆಯುವ ಹೂವು ಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಮುಂಬೈ, ಗೋವಾ, ಪುಣೆ, ದೆಹಲಿ ಹಾಗೂ ವಿದೇಶಗಳಿಗೂ ರಫ್ತಾಗುತ್ತದೆ. ಹಾಗಾಗಿ ವ್ಯಾಪಾರಿಗಳು ಬೆಳೆದಿರುವ ತೋಟಗಳನ್ನು ಒಟ್ಟಿಗೆ ಕೊಂಡುಕೊಳ್ಳುತ್ತಾರೆ.
ಆರು ತಿಂಗಳಿಗೂ ಹೆಚ್ಚು ಕಾಲ ಜೋಪಾನ ಮಾಡಿ ಮಗುವಿನಂತೆ ಹೂವಿನ ಬೆಳೆಯನ್ನು ರೈತರು ಬೆಳೆ ಯುತ್ತಾರೆ. ಜನವರಿಯಲ್ಲಿ ಹೂವಿನ ಅಂಟು ನಾಟಿ ಮಾಡಿದರೆ ಸೆಪ್ಟೆಂಬರ್ ತಿಂಗಳಿನಲ್ಲಿ ತೋಟದ ತುಂಬಾ ಹೂವಿನ ಫಸಲು ಕಂಡು ಬರುತ್ತದೆ ಎಂದು ರೈತರು ಹೇಳುತ್ತಾರೆ.
ಮಳೆಯಿಲ್ಲದೇ ಟ್ಯಾಂಕರ್ ನೀರಿನ ಮೂಲಕ ತೋಟ ಕಾಪಾಡಿಕೊಂಡು ಹೂವಿನ ಬೆಳೆ ಬೆಳೆಯಲಾಗಿದೆ. ಆದರೆ, ಉತ್ತಮ ಬೆಲೆ ಬರುವ ಸಂದರ್ಭದಲ್ಲಿಯೇ ಜಡಿ ಮಳೆಯಾಗುತ್ತಿರುವುದು ರೈತರು ಕಂಗಾಲಾಗುವಂತೆ ಮಾಡಿದೆ. ಬಿಳಿ ಸೇವಂತಿಗೆ ಹೂವು ಕೆ.ಜಿಗೆ ₹ 200 ರಿಂದ 250ಬೆಲೆ ಬಾಳುತ್ತದೆ.
ಆದರೆ, ಮಳೆ ಯಾಗಿ ಹೂವು ತೊಯ್ದರೆ ಇಂತಹ ಹೂವು ಬೇರೆಡೆಗೆ ಸಾಗಿಸಲು ಅನುಕೂಲ ವಾಗುವುದಿಲ್ಲವೆಂದು ವ್ಯಾಪಾರಿಗಳು ಆಸಕ್ತಿ ತೋರುವುದಿಲ್ಲ. ಹಾಗಾಗಿ ಮಾರು ಕಟ್ಟೆಯಲ್ಲಿ ತೊಯ್ದ ಹೂವುಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತವೆ.
ರೈತರು ಮಳೆಯಿಂದಾಗಿ ಹೂವಿನ ಬೆಲೆಯಲ್ಲಿ ನಷ್ಟ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೊಮಾರ ನಹಳ್ಳಿಯ ರೈತ ವೀರಭದ್ರಪ್ಪ ಹೇಳುತ್ತಾರೆ.
ಒಂದು ಎಕರೆ ಜಮೀನಿನಲ್ಲಿ ಸೇವಂತಿಗೆ ಹೂವಿನ ಬೆಳೆ ಬೆಳೆಯ ಬೇಕಾದರೆ ಅಂದಾಜು ₹ 1 ಲಕ್ಷ ವೆಚ್ಚವಾಗುತ್ತದೆ.
ಮಳೆಯಿಲ್ಲದೇ ಟ್ಯಾಂಕರ್ ನೀರಿ ಗಾಗಿಯೇ ₹30–40 ಸಾವಿರ ಹೆಚ್ಚುವರಿ ಖರ್ಚು ಬಂದಿದೆ. ಆದರೆ, ಒಳ್ಳೆಯ ಬೆಳೆ ಬಂದು ಲಾಭ ಬರುತ್ತದೆ ಎಂದು ಸಂತಸ ಇದ್ದಾಗ ಗೌರಿ ಗಣೇಶ ಹಬ್ಬದ ಸಂದರ್ಭ ದಲ್ಲಿಯೇ ಜಡಿ ಮಳೆ ಪ್ರಾರಂಭ ವಾಗಿರುವುದು ಆತಂಕ ಮೂಡಿಸಿದೆ.
ಮಾಡಿದ ಖರ್ಚು ಕೈಗೆ ಬರುವುದೋ ಇಲ್ಲವೋ ಎಂಬ ಭಯ ಉಂಟಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನ ಗೆರಟಿಗನಬೆಲೆಯ ರೈತ ರೊಬ್ಬರು ಸಬ್ಮಂಗಲದ ಬಳಿ ಒಂದು ಎಕರೆ ಪ್ರದೇಶದಲ್ಲಿ ಡೇರಾ ಹೂವು ಬೆಳೆದಿದ್ದು ಉತ್ತಮ ಫಸಲು ಬಂದಿದೆ. ಹೂವೊಂದಕ್ಕೆ ₹ 3–5 ಮಾರಾಟ ವಾಗುತ್ತಿದ್ದು ಗಣೇಶ ಹಬ್ಬ ಹಾಗೂ ಓಣಂ ಹಬ್ಬಗಳಲ್ಲಿ ಬೆಲೆ ಬರಬಹುದೆಂಬ ನಿರೀಕ್ಷೆ ರೈತರದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.