ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿಪಾಲಕನ ಸಹಾಯಕರೊಬ್ಬರು ಹುಲಿ ದಾಳಿಗೆ ಶನಿವಾರ ಸಂಜೆ ಮೃತಪಟ್ಟಿದ್ದಾರೆ. ಮೃತರನ್ನು ಆಂಜಿನಿ (40) ಎಂದು ಗುರುತಿಸಲಾಗಿದೆ. ಅವರು ಜೈವಿಕ ಉದ್ಯಾನದ ಹುಲಿಧಾಮದಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು.
ಸಂಜೆ ಅವರು ಹುಲಿಗಳಿಗೆ ಆಹಾರ ನೀಡಲು ತೆರಳಿದ್ದರು. ಆಗ ಬನ್ನೇರುಘಟ್ಟ ಸಫಾರಿಯ ಬಿಳಿ ಹುಲಿ ‘ಸೌಭಾಗ್ಯ’ಳ ಹನ್ನೊಂದು ತಿಂಗಳ ಎರಡು ಮರಿಗಳು ದಾಳಿ ನಡೆಸಿದವು. ಅವು ಪರಚಿದ್ದರಿಂದ ರಕ್ತಸ್ರಾವವಾಗಿ ಮೃತಪಟ್ಟರು.
ಮಾಂಸ ನೀಡುವಾಗ ಹುಲಿಗಳು ಪಂಜರಕ್ಕೆ ಹೋದ ನಂತರ ಆವರಣಕ್ಕೆ ತೆರಳಿ ಆಹಾರ ನೀಡಬೇಕು. ಈಚೆಗಷ್ಟೇ ಕೆಲಸಕ್ಕೆ ಸೇರಿದ್ದ ಆಂಜಿನಿಗೆ ಅನುಭವವಿಲ್ಲದ್ದರಿಂದ ಈ ಘಟನೆ ಸಂಭವಿಸಿದೆ.
ಆಹಾರ ತೆಗೆದುಕೊಂಡು ಹುಲಿ ಆವರಣದಲ್ಲಿ ತೆರಳಿದಾಗ ಹುಲಿಗಳು ಪಂಜರದಲ್ಲಿ ಇರುವುದಾಗಿ ಭಾವಿಸಿ ಒಳ ಹೋದಾಗ ಆವರಣದಲ್ಲೇ ಇದ್ದ ಮರಿ ಹುಲಿಗಳು ದಾಳಿ ನಡೆಸಿವೆ. ಗಾಬರಿಗೊಂಡ ಆಂಜಿನಿ ಹೊರಬರಲು ಗೊತ್ತಾಗದೇ ಆವರಣದ ಒಳಗೆ ನುಗ್ಗಿರುವುದಾಗಿ ಉದ್ಯಾನದ ಮೂಲಗಳು ತಿಳಿಸಿವೆ.
ಎರಡು ಮರಿ ಹುಲಿಗಳೂ ಪರಚಿ ತೀವ್ರವಾಗಿ ಗಾಯಗೊಳಿಸಿವೆ. ಬಳಿಕ ರಕ್ತಸ್ರಾವದಿಂದ ಆಂಜಿನಿ ಸಫಾರಿಯಿಂದ ಹೊರತರುತ್ತಿದ್ದಂತೆ ಮೃತಪಟ್ಟಿದ್ದಾಗಿ ಅವು ಹೇಳಿವೆ.
ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಅವರನ್ನು ಅಕ್ಟೋಬರ್ 1ರಂದು ಹುಲಿ ಸಫಾರಿಯ ಪ್ರಾಣಿ ಪಾಲಕನ ಸಹಾಯಕನಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು.
ಹುಲಿಗಳ ಚಲನವಲನ ಹಾಗೂ ನಡವಳಿಕೆ ಬಗ್ಗೆ ಅರಿವಿಲ್ಲದ ಅವರು ಮಾಂಸವನ್ನು ನೀಡಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ. ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಅಲಗರಾಜ ಎಂದೇ ಪರಿಚಿತರಾದ ಅವರಿಗೆ ಪತ್ನಿ ಅಕ್ಕಮಾದಮ್ಮ, ಮಕ್ಕಳಾದ ದೇವರಾಜ ಮತ್ತು ಧರ್ಮರಾಜ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.