ದೇವನಹಳ್ಳಿ: ವೈಕುಂಠ ಏಕಾದಶಿ ವಿಶೇಷ ಧಾರ್ಮಿಕ ಆಚರಣೆಯಲ್ಲಿ ಹರಿದು ಬಂದ ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ವೈಕುಂಠ ದ್ವಾರದ ಮೂಲಕ ದರ್ಶನ ಪಡೆದರು. ಅನೇಕ ದೇವಾಲಯಗಳಲ್ಲಿ ಬೆಳಗಿನ ಜಾವದಿಂದಲೇ ಭಕ್ತರು ಸರತಿಯ ಸಾಲಿನಲ್ಲಿ ಒಂದು ದೇವರ ದರ್ಶನ ಪಡೆದು ಪ್ರಸಾದ ಸ್ವಿಕರಿಸಿದರು.
ತಾಲ್ಲೂಕಿನ ತಿಮ್ಮರಾಯಸ್ವಾಮಿ, ಅವತಿ ಮತ್ತು ಬಿದಲೂರು ಗ್ರಾಮದ ಶ್ರೀ ವೇಣುಗೋಪಾಲಸ್ವಾಮಿ, ಲಕ್ಷ್ಮಿಪುರದ ಸೀತಾಕೊದಂಡರಾಮ ಸ್ವಾಮಿ, ದೇವನಹಳ್ಳಿ ನಗರದ ಕಚೇರಿ ಸೀತಾರಾಮಾಂಜನೇಯ ಸ್ವಾಮಿ, ಬೈಪಾಸ್ ರಸ್ತೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವೈಕುಂಠದ್ವಾರ ದರ್ಶನ ಮತ್ತು ಮೂಲ ದೇವರುಗಳಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆಗಳು ನಡೆದವು.
ದೇವನಹಳ್ಳಿ ನಗರದ ಐತಿಹಾಸಕ ಕೋಟೆ ಶ್ರೀವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಇಡೀ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಭಕ್ತರು ವೈಕುಂಠ ದ್ವಾರದ ಮೂಲಕ ದರ್ಶನ ಪಡೆದ ನಂತರ ಶ್ರೀ ವೇಣುಗೋಪಾಲಸ್ವಾಮಿ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ರಾಜಬೀದಿಯಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.