ದೇವನಹಳ್ಳಿ: ಸ್ಮಶಾನಕ್ಕಾಗಿ ಸೂಕ್ತ ಜಾಗ ನೀಡುವಂತೆ ಒತ್ತಾಯಿಸಿ ಇಲ್ಲಿನ ಅರಿಶಿನ ಕುಂಟೆ ಗ್ರಾಮಸ್ಥರು ಕೆಐಎಡಿಬಿ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನಲ್ಲಿ ಕೆ.ಐ.ಎ.ಡಿ.ಬಿ ಭೂ ಸ್ವಾಧೀನ ಪಡಿಸಿಕೊಂಡ ನಂತರ ಬಾಲೇ ಪುರದಲ್ಲಿ ವಾಸವಿರಲು ಜಾಗ ನೀಡಿದೆ ಆದರೆ ಆ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಜಾಗ ನೀಡದೆ ಸ್ಥಳೀಯರನ್ನು ವಂಚಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.
ಅರಿಶಿನಕುಂಟೆ ಗ್ರಾಮದ ಅಕ್ಕಯ್ಯಮ್ಮ ಕ್ಯಾನ್ಸರ್ನಿಂದ ಭಾನುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ ಹೆಣ ಹೂಳಲು ಸ್ಥಳವಿಲ್ಲ.
ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಪ್ರಾಧಿಕಾರ 2002ರಲ್ಲಿ ಅರಿಶಿನ ಕುಂಟೆ, ಗಂಗಮುತ್ತನಹಳ್ಳಿ ಮತ್ತು ಭಾವಪುರದಲ್ಲಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತು. ಆನಂತರ ಬಾಲೆ ಪುರದಲ್ಲಿ ಗ್ರಾಮಸ್ಥರಿಗಾಗಿ 43 ಎಕರೆ ಜಾಗ ಪರಿಹಾರವಾಗಿ ನೀಡಿದೆಯಾದರೂ ಸ್ಮಶಾನ ನಿರ್ಮಿಸಿಲ್ಲ. ಹೀಗಾಗಿ ಗ್ರಾಮದಲ್ಲಿ ಯಾರಾದರೂ ಸತ್ತರೆ ಹೂಳಲು ಜಾಗವಿಲ್ಲದೆ ಕುಟುಂಬದವರು ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು.
`ಮೂರು ಗ್ರಾಮಗಳ 200ಕುಟುಂಬಗಳಿಂದ 4500ಎಕರೆ ಫಲವತ್ತಾದ ಭೂಮಿಯನ್ನು ವಶಕ್ಕೆ ಪಡೆದಿರುವ ಪ್ರಾಧಿಕಾರ ಕೆವಲ ಐದು ಲಕ್ಷ ರೂಪಾಯಿ ಮಾತ್ರ ಪರಿಹಾರವಾಗಿ ನೀಡಿದೆ. ಆದರೆ ಪರ್ಯಾಯವಾಗಿ ನೀಡಿರುವ ಜಾಗದಲ್ಲಿ ಯಾವುದೇ ಮೂಲ ಸೌಕರ್ಯ ನೀಡಿಲ್ಲ ಎಂದು ದೂರಿದರು. ಹೆಚ್ಚುವರಿಯಾಗಿ ಐದು ಲಕ್ಷರೂಪಾಯಿ ಪರಿಹಾರ ನೀಡುವುದಗಿ ಪ್ರಾಧಿಕಾರ ಭರವಸೆ ನೀಡಿತ್ತು ಆದರೆ ಈ ವರೆಗೆ ಇಲಾಖೆಯ ಯಾವುದೇ ಅಧಿಕಾರಿ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಿಲ್ಲ~ ಎಂದು ಗ್ರಾಮದ ವೀರಭದ್ರಪ್ಪ ಹಾಗೂ ಶ್ರಿನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎಲ್.ಸಿ.ನಾಗರಾಜ್ ನೂತನ ಬಡಾವಣೆಗೆ ನೀಡಿರುವ ಸ್ಥಳ ಹಾಗೂ ಭೂಮಿ ಬಗ್ಗೆ ನಿಖರವಾದ ಮಾಹಿತಿ ಕಡತ ಇದುವರೆವಿಗೂ ಕೆ.ಐ.ಎ.ಡಿ.ಬಿ ಇಲಾಖೆಗೆ ನೀಡಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಕಡತ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.