ADVERTISEMENT

`ಸಂಸ್ಕೃತಿಗೆ ಶಿಕ್ಷಣವೇ ಅಡಿಪಾಯ'

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 8:57 IST
Last Updated 6 ಸೆಪ್ಟೆಂಬರ್ 2013, 8:57 IST

ವಿಜಯಪುರ: `ಸಂಸ್ಕೃತಿಗೆ ಶಿಕ್ಷಣವೇ ಅಡಿಪಾಯ' ಎಂದು ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಶೃಂಗೇರಿ ಶಾರದಾ ಪ್ರೌಢಶಾಲೆ ಮತ್ತು ಬಾಲ ಕಾರ್ಮಿಕರ ವಿಶೇಷ ಶಾಲೆಯ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ `ಗುರು ಪುರಸ್ಕಾರ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಸಹ ಮಕ್ಕಳಲ್ಲಿ ಪ್ರೀತಿ ವಿಶ್ವಾಸ, ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿಬೇಕು ಎಂದು ತಿಳಿಸಿದರು.

ಶಾಲಾ ಸಂಸ್ಥಾಪಕ ಅಧ್ಯಕ್ಷ ವಿ.ಎನ್.ರಮೇಶ್ ಮಾತನಾಡಿ, `ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಕೆ.ಪ್ರಮೀಳಾ ಅವರ ಸ್ಮರಣಾರ್ಥ ಪ್ರತಿ ವರ್ಷ ಶಾಲೆಯಲ್ಲಿ ಸೇವೆ ಸಲ್ಲಿಸುವ ಹಿರಿಯ ಶಿಕ್ಷಕರನ್ನು ಗುರುತಿಸಿ ಶಿಕ್ಷಕರ ದಿನಾಚರಣೆ ದಿನ ಪುರಸ್ಕರಿಸಲಾಗುವುದು' ಎಂದರು.
ಪುರಸಭಾ ಸದಸ್ಯ ಬಲಮುರಿ ಶ್ರಿನಿವಾಸ್ ಮಾತನಾಡಿ, `ತಾಯಿ ತಂದೆ ಒಂದು ಹಂತದವರೆಗೆ ಮಕ್ಕಳನ್ನು ತಿದ್ದಿದರೆ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವ, ತಿದ್ದುವ ಜಾಣ್ಮೆ ಶಿಕ್ಷಕರದು' ಎಂದು ತಿಳಿಸಿದರು.

ಶಿಕ್ಷಕಿಯರಾದ ಭಾರತಿ, ಮೀನಾಕ್ಷಿ ಈ ವರ್ಷದ ಗುರು ಪುರಸ್ಕಾರ ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಕಲಾತ್ಮಕವಾಗಿ ರಚಿಸಿದ ಶುಭಾಶಯ ಪತ್ರಗಳನ್ನು ನೀಡಿದರು. ಶಾಲಾಧ್ಯಕ್ಷೆ  ಚಂದ್ರಮುಖಿ ರಮೇಶ್, ಮುಖ್ಯ ಶಿಕ್ಷಕ ಜಿ.ಎಸ್.ರವೀಂದ್ರ, ಶಿಕ್ಷಕ ಶಿವಕುಮಾರ್, ಮುನಿರಾಜು, ಜೆಸಿಐ ಉಪಾಧ್ಯಕ್ಷ ತ್ಯಾಗರಾಜ್ ಉಪಸ್ಥಿತರಿದ್ದರು.

ಪುಷ್ಪಲತಾ ಪ್ರಾರ್ಥಿಸಿದರು. ಯಶಸ್ವಿನಿ ನಿರೂಪಿಸಿದರು. ಗಿರೀಶ್ ಸ್ವಾಗತಿಸಿ, ಗೋಪಿಕಾ ವಂದಿಸಿದರು.
ಪ್ರಗತಿ ಪ್ರೌಢಶಾಲೆ: `ಗುರು ಕತ್ತಲಿನಿಂದ ಬೆಳಕಿನೆಡೆಗೆ ದಾರಿ ತೋರುವ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾನೆ' ಎಂದು ವಿಜ್ಞಾನ ಶಿಕ್ಷಕ ಎನ್. ಸುನಿಲ್‌ಕುಮಾರ್ ತಿಳಿಸಿದರು.

ಪಟ್ಟಣದ ಪ್ರಗತಿ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ನಡೆಯುವುದು ಪ್ರತಿ ವಿದ್ಯಾರ್ಥಿಯ ಕರ್ತವ್ಯ ಎಂದರು. ಮುಖ್ಯಶಿಕ್ಷಕ ವಿ.ಬಸವರಾಜ್ ಮಾತನಾಡಿ, `ವಿದ್ಯಾರ್ಥಿಗಳು ಶಾಲೆಗೆ ಉತ್ತಮ ಫಲಿತಾಂಶ ತಂದು ಒಳ್ಳೆಯ ಚಾರಿತ್ರ್ಯ ಮತ್ತು ವಿನಯವಂತಿಕೆಯನ್ನು ಬೆಳೆಸಿಕೊಂಡರೆ ಅದೇ ಗುರುವಿಗೆ ನೀಡುವ ಕಾಣಿಕೆ' ಎಂದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಅಶ್ವತ್ಥಿ ರಾಜೇಶ್, ವೀಣಾ ಲಹರಿ, ಮೋಹನ್ ರಾಜ್, ಮಧು ಮತ್ತಿತರ ವಿದ್ಯಾರ್ಥಿಗಳು ಅಭಿನಂದಿಸಿದರು. ಬೋಧಕ ಮತ್ತು ಬೋಧಕೇತರ ವರ್ಗ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.