ADVERTISEMENT

ಹಜಾರೆ ಬಂಧನ: ವಕೀಲರ ಖಂಡನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2011, 19:30 IST
Last Updated 18 ಆಗಸ್ಟ್ 2011, 19:30 IST
ಹಜಾರೆ ಬಂಧನ: ವಕೀಲರ ಖಂಡನೆ
ಹಜಾರೆ ಬಂಧನ: ವಕೀಲರ ಖಂಡನೆ   

ದೇವನಹಳ್ಳಿ : ಸಶಕ್ತ ಜನಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ಹಾಗೂ ಅಣ್ಣಾ ಹಜಾರೆ ಬಂಧನ ಖಂಡಿಸಿ ತಾಲ್ಲೂಕು ವಕೀಲರ ಸಂಘದವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ತಾಲ್ಲೂಕು ವಕೀಲರ ಸಂಘ ಕಾರ್ಯದರ್ಶಿ ಮುನಿರಾಜು, ದೇಶದಲ್ಲಿ ದಿನೇ ದಿನೇ ಹಚ್ಚುತ್ತಿರುವ ಭ್ರಷ್ಟಾಚಾರ ಎಲ್ಲಾ ಇಲಾಖೆ ಮತ್ತು ಎಲ್ಲಾ ರಂಗದಲ್ಲಿ ಬೇರುಬಿಟ್ಟಿದೆ. ಭ್ರಷ್ಟಾಚಾರ ತಡೆಗೆ ಪ್ರಬಲ ಲೋಕಪಾಲ ಮಸೂದೆಯೇ ಏಕೈಕ ಮಾರ್ಗ ಎಂದರು. ಹಜಾರೆ ಅವರನ್ನು ಬಂಧಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡಿರುವ  ದೆಹಲಿ ಪೊಲೀಸರ ದೌರ್ಜನ್ಯ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲರಾದ ಸಾವಿತ್ರಮ್ಮ ಮಾತನಾಡಿ, ಭ್ರಷ್ಟಾಚಾರ ತೆಡೆಗಟ್ಟದಿದ್ದರೆ ದೇಶದ ಪ್ರಗತಿ ಸಾಧ್ಯವಿಲ್ಲ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿವಾಗಿ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂದರು.  ಆದ್ದರಿಂದ ಸರ್ಕಾರ ಕಠಿಣ ಧೊರಣೆ ಬಿಟ್ಟು ಪ್ರಬಲ ಲೋಕಪಾಲ್ ಮಸೂದೆಗೆ ಅನುವು ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಒಬ್ಬ ಹಜಾರೆಯ ಜೊತೆಗೆ ಕೋಟಿ ಕೋಟಿ ಹಜಾರೆಗಳನ್ನು ಎದುರಿಸಬೇಕಾಗುತ್ತದೆ ಎಂದರು.

ವಕೀಲ ಸಂಘ ಉಪಾಧ್ಯಕ್ಷ ಆರ್. ಕೃಷ್ಣಮೂರ್ತಿ, ವಕೀಲರಾದ ಎನ್.ನಾರಾಯಣಸ್ವಾಮಿ, ಡಿ.ಎಂ.ಕೃಷ್ಣ, ಕೆ.ನಾರಾಯಣಸ್ವಾಮಿ ಇದ್ದರು, ಪ್ರತಿಭಟನೆಗೆ ಮುನ್ನ ನ್ಯಾಯಾಲಯದ ಆವರಣದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಮಿನಿವಿಧಾನ ಸೌಧಕ್ಕೆ ತೆರಳಿ ಪ್ರತಿಭಟನೆ ನಡೆಸಿದ ನಂತರ ಉಪ ತಹಸೀಲ್ದಾರ್ ಚನ್ನಪ್ಪಗೆ ಮನವಿ ಪತ್ರ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.