ADVERTISEMENT

ಆನೇಕಲ್: ಸಮ್ಮೇಳನಕ್ಕೆ ಭಿಕ್ಷೆ ಬೇಡುವ ಪರಿಸ್ಥಿತಿ

ಸರ್ಕಾರಕ್ಕೆ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನದಲ್ಲಿ ಕವಿಗಳ ತರಾಟೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 4:53 IST
Last Updated 12 ಮಾರ್ಚ್ 2023, 4:53 IST
ಆನೇಕಲ್ನಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯ ಮಟ್ಟದ 18ನೇ ಸುಗಮ ಸಂಗೀತ ಸಮ್ಮೇಳನದಲ್ಲಿ ಕಾವ್ಯಶ್ರೀ ಮತ್ತು ಭಾವಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು
ಆನೇಕಲ್ನಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯ ಮಟ್ಟದ 18ನೇ ಸುಗಮ ಸಂಗೀತ ಸಮ್ಮೇಳನದಲ್ಲಿ ಕಾವ್ಯಶ್ರೀ ಮತ್ತು ಭಾವಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು   

ಆನೇಕಲ್: ಸಾಹಿತ್ಯ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳಿಗೆ ಹಣ ನೀಡಲು ಸರ್ಕಾರ ಮೀನಾ ಮೇಷ ಎಣಿಸುತ್ತಿರುವುದು ವಿಷಾದನೀಯ. ಸರ್ಕಾರ ಈ ಬಗ್ಗೆ ಕಾಳಜಿ ತೋರಬೇಕು. ಸಮ್ಮೇಳನಗಳಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣ ಮಾಡಬಾರದು ಎಂದು ಕವಿ ಬಿ.ಆರ್‌.ಲಕ್ಷ್ಮಣರಾವ್ ಹೇಳಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಇಲ್ಲಿ ಆರಂಭಗೊಂಡ ರಾಜ್ಯ ಮಟ್ಟದ 18ನೇ ಸುಗಮ ಸಂಗೀತ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಸುಗಮ ಸಂಗೀತ ಸಮ್ಮೇಳನಗಳಿಗೆ ಅನುದಾನಕ್ಕೆ ಸರ್ಕಾರದ ಬಳಿ ಭಿಕ್ಷೆ ಬೇಡುವಂತಾಗಬಾರದು. ನೀಡುವ ಅಲ್ಪ ಅನುದಾನಕ್ಕೂ ಅಲೆದಾಡಬೇಕಾದ ಸ್ಥಿತಿ ಇರುವುದು ದುಃಖಕರ ಸಂಗತಿಯಾಗಿದೆ. ಸುಗಮ ಸಂಗೀತ ಸಮ್ಮೇಳನಕ್ಕೆ ಹಣ ಬಿಡುಗಡೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ’ ಎಂದು ತರಾಟೆಗೆ ತೆಗದುಕೊಂಡರು.

ADVERTISEMENT

‘ಜನರನ್ನು ತಲುಪುವ ವಿಶಿಷ್ಟ ಶಕ್ತಿಯಿರುವ ಸುಗಮ ಸಂಗೀತ ಮನರಂಜನೆಗಲ್ಲ. ಜನರ ಭಾವನೆಗಳ ಮೇಳವಾಗಿದೆ. ಹಾಗಾಗಿ ಸುಗಮ ಸಂಗೀತಕ್ಕೆ ಸರ್ಕಾರ ಹೆಚ್ಚಿನ ಪ್ರಾಶಾಸ್ತ್ಯ ಕೊಡಬೇಕು. ಈ ನಿಟ್ಟಿನಲ್ಲಿ ಸಾಹಿತಿ, ಗಾಯಕರು, ಕಲಾವಿದರು ದನಿ ಎತ್ತಬೇಕು’ ಎಂದರು.

ಸಮ್ಮೇಳನಾಧ್ಯಕ್ಷ ಎನ್.ಎಸ್.ಪ್ರಸಾದ್‌ ಮಾತನಾಡಿ, ಸಂಗೀತವೆಂದರೆ ನಿಶಬ್ಧದ ಆವರಣದಲ್ಲಿ ನಾದದ ವಿನ್ಯಾಸವೇ ಸಂಗೀತ. ಹಾಗಾಗಿ ಸಂಗೀತ ಕಾರ್ಯಕ್ರಮಗಳು ಆನಂದಕರ ವಾತಾವರಣ ಸೃಷ್ಟಿಸುತ್ತದೆ ಎಂದರು.

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ, ಪುರಸಭೆ ಉಪಾಧ್ಯಕ್ಷ ಮಾಲಾ ಭಾರ್ಗವ್‌, ಗಾಯಕಿ ರತ್ನಮಾಲ ಪ್ರಕಾಶ್, ಪರಿಷತ್‌ನ ಕಿಕ್ಕೇರಿ ಕೃಷ್ಣಮೂರ್ತಿ, ನಗರ ಶ್ರೀನಿವಾಸ ಉಡುಪ ಇದ್ದರು.

ಕವಿಗಳ ಸ್ಮರಣೆ: ಚೆನ್ನವೀರ ಕಣವಿ, ನಿಸಾರ್‌ ಅಹಮದ್‌, ಎನ್‌.ಎಸ್‌.ಲಕ್ಷ್ಮೀನಾರಾಯಣಭಟ್‌, ಡಾ.ಶಿವಮೊಗ್ಗ ಸುಬ್ಬಣ್ಣ ಅವರನ್ನು ಸ್ಮರಿಸಲಾಯಿತು.

ಸಮ್ಮೇಳನದಲ್ಲಿ ಇಂದು: ಭಾನುವಾರ ಬೆಳಗ್ಗೆ 9.30ಕ್ಕೆ ಸ್ಥಳೀಯ ಗಾಯಕರಿಂದ ಗಾಯನ, 10.30ರಿಂದ ಛಂದ-ಚಂದ ಕಾರ್ಯಕ್ರಮ. 11.30ರಿಂದ ನಿತ್ಯ ನೂತನ ಕಾರ್ಯಕ್ರಮದಲ್ಲಿ ಕುವೆಂಪು, ಬೇಂದ್ರೆ, ಪುತಿನ, ಅಡಿಗರು, ಕೆ.ಎಸ್.ನರಸಿಂಹಸ್ವಾಮಿ ಅವರ ಕವಿತೆ ವಾಚನ, ಸಂಜೆ ಎನ್‌.ಎಸ್‌.ಪ್ರಸಾದ್‌ ಅವರಿಂದ ವಾದ್ಯ-ವೈಭವ ನಡೆಯಲಿದೆ. ಸಂಜೆ 7 ಗಂಟೆಗೆ ಗೀತ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಮುದ್ದುಕೃಷ್ಣ, ಮುದ್ದು ಮೋಹನ್‌, ರಾಜಾರಂ, ಪುತ್ತೂರು ನರಸಿಂಹರಾವ್‌, ಎಂ.ಡಿ.ಪಲ್ಲವಿ, ಸಂಗೀತ ಕಟ್ಟಿ, ಸುರೇಖ, ಶಶಿಕಲಾ ಕಾರ್ಯಕ್ರಮ ನೀಡಲಿದ್ದಾರೆ.

ಕವಿಯ ನೋಡಿ ಕವಿತೆ ಕೇಳಿ: ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ವಿಚಾರಗೋಷ್ಠಿ ಕವಿತ ನೋಡಿ ಕವಿತೆ ಕೇಳಿ ಕಾರ್ಯಕ್ರಮ ವಿಶಿಷ್ಟವಾಗಿತ್ತು. ಕವಿತೆ ರಚಿಸಿದ ಕವಿಯು ಕವನ ವಾಚನ ನಡೆಸಿದರೇ, ಗಾಯಕರು ಕವನವನ್ನು ಲಯಬದ್ಧವಾಗಿ ಹಾಡುವ ಮೂಲಕ ಜನರ ಮನ ಗೆದ್ದರು.

ಸಂತೋಷ್‌ ಚೊಕ್ಕಾಡಿ, ನಂದಿನಿ ಹೆದ್ದುರ್ಗ, ಆಶಾ ಜಗದೀಶ್, ಜಯಪ್ಪ ಹೊನ್ನಾಳಿ, ಮಮತಾ ಅರಸಿಕೆರೆ, ಜೆಮ್‌ ಶಿವು, ರವೀಂದ್ರನಾಥ್‌ ಸಣ್ಣಕ್ಕಿಬೆಟ್‌, ಸತ್ಯೇಶ್ ಬೆಳ್ಳೂರು, ಶ್ರೀದೇವಿ ಕೆರೆಮನೆ ಕವಿಗಳು ಭಾಗವಹಿಸಿದ್ದರು. ಈ ಕವಿಗಳು ಕವನವನ್ನು ಗಾಯಕರಾದ ಅಪರ್ಣ, ಸಂಗೀತಾ ರಾಘವೇಂದ್ರ, ಶೃತಿ ತುಮಕೂರು, ಶರಣ್ ಅಯ್ಯಪ್ಪ, ಮಹೇಶ್‌ ಪ್ರಿಯದರ್ಶನ್‌, ಶ್ರೀಧರ್‌.ಟಿ.ಎನ್‌, ಚಾಂದಿನಿ ಗರ್ತಿಕೆರೆ, ಮಲ್ಲಿಗೆ ಸುದೀರ್‌, ಸ್ಪರ್ಶ ಕವಿತೆ ಹಾಡಿದರು.

ಗೀತೋತ್ಸ: ಶ್ರೀನಿವಾಸ ಉಡುಪ, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಶಿವಶಂಕರ್‌, ಜೋಸೆಫ್‌ ಹೆರಾನಿಯಮಸ್‌, ರವಿ ಕೃಷ್ಣಮೂರ್ತಿ, ನಾಗಚಂದ್ರಿಕಾ ಭಟ್‌, ಪ್ರೇಮಲತಾ ದಿವಾಕರ್‌, ಸುನೀತಾ, ಮಂಗಳ ರವಿ, ಸುಪ್ರಿಯ ರಘುನಂದನ್‌, ಸೀಮಾ ರಾಯ್ಕರ್‌ ಅವರು ಗೀತೋತ್ಸವದಲ್ಲಿ ಭಾಗಿಯಾಗಿ ತಮ್ಮ ಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.